ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿಎಸ್‍ವೈ; ಬಿಜೆಪಿ 130 ಸ್ಥಾನ ಗೆಲ್ಲುವ ಸಂಕಲ್ಪ

ಬೆಂಗಳೂರು, ಜೂ. 30- ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ವಿ.ಆರ್. ವಾಲಾ ಅವರನ್ನು ಭೇಟಿಯಾಗಿ ಉಭಯಕುಶಲೋಪರಿ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯಪಾಲರ ಕಣ್ಣಿನ ಲೇಸರ್ ಆಪರೇಷನ್ ಆಗಿತ್ತು. ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರೊಂದಿಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಅನೇಕ ವಿಷಯಯಗಳನ್ನು ಸಮಾ ಧಾನವಾಗಿ ತಿಳಿದುಕೊಂಡಿದ್ದಾರೆ. ಯಾವುದೇ ರಾಜಕೀಯ ಮಾತನಾಡಲು ಬಂದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ನಾನು ಎಲ್ಲವನ್ನೂ ಮಾಧ್ಯಮಗಳ ಮೂಲಕ ಗಮನಿಸು ತ್ತಿದ್ದೇನೆ. ಎಲ್ಲರ ಮಾತುಗಳನ್ನೂ ನಾನು ಆಲಿಸುತ್ತಿದ್ದೇನೆ. ಆದರೆ ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ನೀಡಲ್ಲ. ಎರಡು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರಬೇಕು. 130 ಸ್ಥಾನ ಗೆಲ್ಲುವ ಸಂಕಲ್ಪ ಇದೆ. ಹೀಗಾಗಿ 10- 12 ದಿನ ಪ್ರವಾಸ ಆರಂಭಿಸುವೆ ಎಂದರು. ಬಿಜೆಪಿಯ ಮೂವರು ನಾಯಕರ ಷಡ್ಯಂತ್ರ ಆರೋಪ ಹಾಗೂ ನಾಯಕತ್ವ ಬದಲಾವಣೆ ಪ್ರಶ್ನೆಗೆ ಉತ್ತರ ನೀಡಲು ಸಿಎಂ ಬಿಎಸ್‍ವೈ ನಿರಾಕರಿಸಿದರು.