ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ: ಶಾಸಕ ಯತ್ನಾಳ್ ಹೊಸ ಬಾಂಬ್

ವಿಜಯಪುರ, ಮಾ.14-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ. ಸಿಡಿ ಪ್ರಕರಣದ ಹಿಂದೆ ಬಿಜೆಪಿಯ ಓರ್ವ ಉನ್ನತ ನಾಯಕ ಮತ್ತು ಕಾಂಗ್ರೆಸ್‍ನ ಓರ್ವ ಉನ್ನತ ನಾಯಕನ ಕೈವಾಡವಿದೆ. ಇವರಿಬ್ಬರೂ ಸೇರಿಕೊಂಡು ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿ ದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಉನ್ನತ ನಾಯಕನ ಬಳಿ ಇನ್ನೂ ಹಲವರ ಸಿ.ಡಿ.ಗಳಿವೆ. ಕಾಂಗ್ರೆಸ್ ಉನ್ನತ ನಾಯಕನ ಮನೆಯಲ್ಲೂ ಇಂತಹ ಸಿ.ಡಿ.ಗಳಿವೆ ಎಂದ ಅವರು, ಈ ಪ್ರಕರಣವನ್ನು ಎಸ್‍ಐಟಿ ತನಿಖೆ ನಡೆಸಿದರೆ ನ್ಯಾಯ ದೊರೆ ಯುವುದಿಲ್ಲ. ಎಸ್‍ಐಟಿ ತಂಡದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಆಪ್ತರಿದ್ದು, ಅವರು ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರ ಬರಬೇಕಾದರೆ ಸಿಬಿಐ ತನಿಖೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಸಂತ್ರಸ್ತೆ ಎನ್ನಲಾದ ಯುವತಿಯ ಮೊದಲಿನ ವೀಡಿಯೋ ದಲ್ಲಿ ಆಕೆ ವಿಜಯಪುರ ಭಾಷೆಯಲ್ಲಿ ಮಾತನಾಡಿದ್ದಾರೆ. ಶನಿವಾರ ಬಿಡುಗಡೆಯಾದ 34 ಸೆಕೆಂಡ್‍ಗಳ ವೀಡಿಯೋದಲ್ಲಿ ಬೆಂಗಳೂರಿನ ಭಾಷೆಯಲ್ಲಿ ಮಾತನಾಡಿದ್ದಾರೆ. ದಿಢೀರನೆ ಭಾಷೆ ಬದಲಾಗಿದ್ದು ಹೇಗೆ? ಎಂದು ಯತ್ನಾಳ್ ಅನುಮಾನ ವ್ಯಕ್ತಪಡಿಸಿದರು.