ರಾಜ್ಯದ 6 ಕೋಟಿ ಜನರಿಗೂ ಲಸಿಕೆ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ

ಬೆಂಗಳೂರು,ಮಾ.24(ಕೆಎಂಶಿ)-ಕೋವಿಡ್ ಎರಡನೇ ಅಲೆ ಹರಡುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ 6 ಕೋಟಿ ಜನರಿಗೂ ಕೊರೊನಾ ಸೋಂಕು ತಡೆ ಲಸಿಕೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಿನ್ನೆ ನಾನು ಕೋವಿಡ್ ಲಸಿಕೆ ತೆಗೆದುಕೊಂಡಿದ್ದೇನೆ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು. ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಾಕುವುದಾಗಿ ಹೇಳುತ್ತಿದೆ, ಸಣ್ಣ ಮಕ್ಕಳಿಗೂ ರೋಗ ಬರುವ ಸಾಧ್ಯತೆ ಇರುವುದರಿಂದ ಪೆÇೀಲಿಯೋ ಮಾದರಿಯಲ್ಲಿ ಕೋವಿಡ್ ಲಸಿಕೆಯನ್ನು ಕುಟುಂಬದ ಎಲ್ಲ ಸದಸ್ಯರಿಗೂ 15 ದಿನಗಳಲ್ಲಿ ನೀಡಬೇಕು. ಈ ಕಾರ್ಯಕ್ಕೆ ಸುಮಾರು 1,000 ಕೋಟಿ ಖರ್ಚಾಗಬಹುದು, ಇದರಿಂದ ಆರೋಗ್ಯವಂತರು ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು ಎಂದರು. ವಿಧಾನಮಂಡಲದ ಪ್ರಸಕ್ತ ಬಜೆಟ್ ಅಧಿವೇಶನ ದಲ್ಲಿ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ, ಈ ಕಾರಣದಿಂದ ಅಧಿವೇಶನದಲ್ಲಿ ತಾವು ಭಾಗವಹಿಸಲಿಲ್ಲ. ಸದನದಲ್ಲಿ ಜನರ ಸಮಸ್ಯೆಗಳಿ ಗಿಂತ ಬೇರೆ ವಿಷಯಗಳ ಚರ್ಚೆಯೇ ಆಗುತ್ತಿದೆ, ವಿರೋಧ ಪಕ್ಷದ ನಾಯಕರು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಟ್ಟೆ ಖರೀದಿ ವಿಚಾರ, ಚುನಾವಣೆಯ ಸೋಲು-ಗೆಲುವಿನ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ.

ಕೆಪಿಎಸ್‍ಸಿ ಅಕ್ರಮ, ಬೆಂಗಳೂರಿನಲ್ಲಿ ಭೂ ಕಬಳಿಕೆ, ರಾಮನಗರದಲ್ಲಿ ರೇಷ್ಮೆಗೂಡು ಮಾರುಕಟ್ಟೆ ಅಧಿಕಾರಿಯೊಬ್ಬರು ಎರಡೂವರೆ ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಆರೋಪದ ಬಗ್ಗೆ ಚರ್ಚೆಯಾಗಬೇಕಿತ್ತು.