ರಾಜ್ಯದ ಪ್ರಾದೇಶಿಕ ವಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ

ಬೆಂಗಳೂರು, ಫೆ.4(ಕೆಎಂಶಿ)- ರಾಜ್ಯದ ಎಲ್ಲಾ ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸ ಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಇಂದು ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ‘ಆರೈಕೆಯ ಅಂತರ ವನ್ನು ಕಡಿತಗೊಳಿಸಿ’ ಎಂಬ ಘೋಷ ವಾಕ್ಯವನ್ನು ಬಿಡುಗಡೆ ಮಾಡಿದರು.

ಕಿದ್ವಾಯಿ ಸಂಸ್ಥೆಯ ಆಧುನೀಕರಣ ಕ್ಕಾಗಿ ಎರಡು ಪೆಟ್ ಸ್ಕ್ಯಾನ್ ಮೆಷಿನ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚುವ ಪೆಟ್ ಸ್ಕ್ಯಾನ್ ಪರೀಕ್ಷೆ ಖಾಸಗಿ ಆಸ್ಪತ್ರೆಯಲ್ಲಿ 25,000 ರೂ.ಗಳವರೆಗೆ ವೆಚ್ಚವಾಗುತ್ತದೆ. ಬಡರೋಗಿ ಗಳಿಗೆ ಸಹಾಯ ಒದಗಿಸುವ ಉದ್ದೇಶ ದಿಂದ ಸರ್ಕಾರ ಈ ದುಬಾರಿ ಸ್ಕ್ಯಾನ್ ಸೌಲಭ್ಯವನ್ನು ಕೇವಲ 8 ರಿಂದ 10 ಸಾವಿರ ದೊಳಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ಔಷಧಿಗಳು
ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಿಸಲು ಸಂಬಂಧಪಟ್ಟ ತಯಾರಿಕಾ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿಗಳು ಸುಲಭ ದರದಲ್ಲಿ ದೊರಕಿಸಿಕೊಡಲು ಚಿಂತನೆ ನಡೆಸಲಾಗಿದೆ. ಇಡೀ ರಾಜ್ಯದಲ್ಲಿ ಅಗ್ಗ ದರದಲ್ಲಿ ಕ್ಯಾನ್ಸರ್ ಔಷಧಿಗಳನ್ನು ಪೂರೈಸುವ ಸೊಸೈಟಿಯನ್ನು ಸ್ಥಾಪಿಸುವ ಯೋಜನೆಯಿದೆ. ಕ್ಯಾನ್ಸರ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳೂ ಸೇರಿದಂತೆ ಆರೋಗ್ಯ ಮೂಲ ಸೌಕರ್ಯವನ್ನು ತಾಲೂಕು ಮಟ್ಟದಿಂದ ಅಭಿವೃದ್ಧಿ ಮಾಡುವ ಮೂಲಕ ಆರೋಗ್ಯ ಕರ್ನಾಟಕದ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್‍ಗೆ ಚಿಕಿತ್ಸೆ ಇದ್ದು, ಯಾರೂ ಧೃತಿಗೆಡಬೇಕಾಗಿಲ್ಲ. ಚಿಕಿತ್ಸೆಯ ನಂತರ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ತಾಲೂಕು ಮಟ್ಟದ ಆಸ್ಪತ್ರೆಯಿಂದ ಹಿಡಿದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯವರೆಗೂ ಒಂದು ವರ್ಷಗಳ ಕಾಲ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ನಿವಾರಣೆಯ ಬಗ್ಗೆ ಜಾಗೃತಿ ಅಭಿಯಾನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮೃದ್ಧ ಹಾಗೂ ಸದೃಢ ರಾಜ್ಯ ನಿರ್ಮಾಣವಾಗಲು ಆರೋಗ್ಯ ಕರ್ನಾಟಕ ಬಹಳ ಮುಖ್ಯ. ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಲಿದೆ. ಜನರನ್ನು ಸರ್ವರೀತಿಯಲ್ಲೂ ಸಶಕ್ತಗೊಳಿಸಿ ಕರ್ನಾಟಕದ ವಿಕಾಸದಲ್ಲಿ ಪಾಲುದಾರರಾಗುವಂತೆ ಮಾಡಲಾಗುವುದು. ಸಮುದಾಯ ಹಾಗೂ ಸರ್ಕಾರ ಒಟ್ಟುಗೂಡಿ ಕ್ಯಾನ್ಸರ್ ಪೀಡೆಯನ್ನು ಸಮಾಜದಿಂದ ದೂರವಾಗಿಸಬಹುದು. ಜಾಗೃತಿ ಅಭಿಯಾನ ಈ ಉದ್ದೇಶದ ಈಡೇರಿಕೆಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕಳೆದ 10-12 ವರ್ಷಗಳಿಂದ ಧ್ವನಿಪಟಲದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಯ ನಂತರ ಮಾತನಾಡಬಲ್ಲವರಾಗಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿದ್ದ ಮಹಿಳೆ, ತಮ್ಮ ಕ್ಯಾನ್ಸರ್‍ನ ಅನುಭವಗಳನ್ನು, ಮನೋಬಲವನ್ನು ಹಾಗೂ ಧೂಮಪಾನದ ಅಪಾಯಗಳು ಹಾಗೂ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾದ ಬಗೆಯ ಕುರಿತು ಆತ್ಮಸ್ಥೈರ್ಯದಿಂದ ಕಾರ್ಯಕ್ರಮದಲ್ಲಿ ಮಾತನಾಡಿದ್ದನ್ನು ಮುಖ್ಯಮಂತ್ರಿಗಳು ಪ್ರಶಂಸಿಸಿದರು.