ಸಂತೋಷ್ ಪಾರ್ಥಿವ ಶರೀರ ಕುಟುಂಬದ ವಶಕ್ಕೆ

ಉಡುಪಿ,ಏ.13-ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ಕುಟುಂಬ ದವರಿಗೆ ಬುಧವಾರ ರಾತ್ರಿ ಹಸ್ತಾಂತರಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಬೆಳಗಾವಿಯ ಅವರ ನಿವಾಸಕ್ಕೆ ದೇಹವನ್ನು ಕೊಂಡೊಯ್ಯಲಾಗುತ್ತಿದ್ದು, ನಾಳೆ ಮುಂಜಾನೆ ಬೆಳಗಾವಿ ತಲುಪುವ ನಿರೀಕ್ಷೆಯಿದೆ. ನಿನ್ನೆ ಬೆಳಗ್ಗೆಯಿಂದ ಬುಧವಾರ ಸಂಜೆಯವರೆಗೂ ಇಲ್ಲಿನ ಬಸ್ ನಿಲ್ದಾಣದ ಸಮೀಪವಿರುವ ಶಾಂಭವಿ ಲಾಡ್ಜ್‍ನ ಕೊಠಡಿಯಲ್ಲಿದ್ದ ಮೃತದೇಹವನ್ನು ಅವರ ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿದ ನಂತರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಸ್ಥಳಾಂತರಿಸಿದರು. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬ ಸದಸ್ಯರ ವಶಕ್ಕೆ ಇಂದು ರಾತ್ರಿ ಹಸ್ತಾಂತರಿಸಲಾಯಿತು. ಸಚಿವ ಈಶ್ವರಪ್ಪ ಮತ್ತು ಅವರ ಆಪ್ತರನ್ನು ಬಂಧಿಸುವವರೆಗೂ ಮೃತದೇಹವನ್ನು ಸ್ವೀಕರಿಸುವುದಿಲ್ಲ ಹಾಗೂ ಬೆಳಗಾವಿಗೆ ಕೊಂಡೊಯ್ಯುವುದಿಲ್ಲ ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು, ಆರೋಪಿ ಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಕುಟುಂಬದ ಸದಸ್ಯರು ದೇಹವನ್ನು ಸ್ವೀಕರಿಸಿ ಬೆಳಗಾವಿಗೆ ಕೊಂಡೊಯ್ದರು.