ವಿದೇಶದಲ್ಲಿ ಕೆಲಸದ ಆಮಿಷವೊಡ್ಡಿ 1.50 ಲಕ್ಷ ರೂ. ವಂಚಿಸಿದ್ದ ವಂಚಕನ ಬಂಧನ

ಮಡಿಕೇರಿ, ನ.8- ವಿದೇಶದಲ್ಲಿ ಉದ್ಯೋಗ ಕೊಡಿಸು ವುದಾಗಿ ಹೇಳಿ ಯುವಕನೊಬ್ಬನಿಂದ 1.50 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂ ಧಿಸಿದಂತೆ ಕೇರಳ ರಾಜ್ಯ ಕಾಸರಗೋಡು ಮೂಲದ ಆರೋಪಿ ಎಂ.ಹೆಚ್. ಶ್ರೀನಾಥ್(45) ಎಂಬಾತನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಮೂಲತಃ ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಬಾಲಂಬಿ ಗ್ರಾಮ, ಎಂ.ಚೆಂಬು ನಿವಾಸಿ ಜೇಮ್ಸ್ ಜೋಸೆಫ್(24) ಎಂಬವರಿಗೆ ತಮ್ಮ ಧರ್ಮಗುರುಗಳ ಮೂಲಕ ಕೇರಳ ಕಾಸರಗೋಡು ಮುಟ್ಟತ್ತೋಡಿ ಗ್ರಾಮದ ಎಂ.ಹೆಚ್.ಶ್ರೀನಾಥ್ ಮತ್ತು ಅವನ ಸೋದರ ಸಂಬಂಧಿ ವಿನೋದ್ ಪರಿಚಯವಾಗಿತ್ತು.

2021ರ ನವೆಂಬರ್ 7ರಂದು ಸಂಜೆ 6 ಗಂಟೆಯ ವೇಳೆಗೆ ಜೇಮ್ಸ್ ಜೋಸೆಫ್ ಮನೆಗೆ ಆಗಮಿಸಿದ್ದ ಶ್ರೀನಾಥ್ ಮತ್ತು ವಿನೋದ್ ಅವರುಗಳು, ‘eóÉಕ್ ರಿಪಬ್ಲಿಕ್’ ದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಈ ಉದ್ಯೋಗ ಪಡೆಯಲು ಒಟ್ಟು 4 ಲಕ್ಷ ರೂ.ಗಳು ಖರ್ಚಾಗುತ್ತವೆ. ಮುಂಗಡ ಪ್ರೋಸೆಸಿಂಗ್ ಚಾರ್ಜ್ ಎಂಬಂತೆ 1.50 ಲಕ್ಷ ರೂ. ಹಾಗೂ ವೀಸಾ ಬಂದ ಬಳಿಕ ಇನ್ನುಳಿದ 2.50 ಲಕ್ಷ ರೂ.ಗಳನ್ನು ನೀಡುವಂತೆ ತಿಳಿಸಿದ್ದರು.

ಖಾತೆಗೆ ಹಣ ಜಮೆ: ಈ ಎಲ್ಲ ಬೆಳವಣಿಗೆಗಳ ನಡುವೆ ಜೇಮ್ಸ್ ಜೋಸೆಫ್, ಶ್ರೀನಾಥ್ ಹಾಗೂ ವಿನೋದ್ ಅವರುಗಳ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈ ನಡುವೆ ಜೇಮ್ಸ್ ಜೋಸೆಫ್ ಅವರಿಗೆ ಕೆಲಸದ ಆಫರಿಂಗ್ ಲೆಟರ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಜೇಮ್ಸ್ ಜೋಸೆಫ್ ಸಂಪಾಜೆಯ ಕೆನರಾ ಬ್ಯಾಂಕ್ ಖಾತೆಯಿಂದ ಶ್ರೀನಾಥ್ ನೀಡಿದ್ದ ಕಾಸರಗೋಡು ವಿನ ಖಾಸಗಿ ಬ್ಯಾಂಕ್ ಖಾತೆ ಒಂದಕ್ಕೆ 2021ರ ನ.15ರಂದು 1.50 ಲಕ್ಷ ರೂ.ಗಳನ್ನು ಜಮೆ ಮಾಡಿದ್ದರು. ಈ ವೇಳೆ ಮುಂದಿನ 3 ತಿಂಗಳಲ್ಲಿ ವೀಸಾ ಬರಲಿದ್ದು, ಇನ್ನುಳಿದ 2.50 ಲಕ್ಷ ರೂ.ಗಳನ್ನು ಹೊಂದಿಸಿಡುವಂತೆ ಶ್ರೀನಾಥ್, ಜೇಮ್ಸ್ ಜೋಸೆಫ್‍ಗೆ ತಿಳಿಸಿದ್ದ ಎನ್ನಲಾಗಿದೆ.

‘ಪೋರ್ಚ್‍ಗಲ್’ ಆಫರ್: ಶ್ರೀನಾಥ್ ತಿಳಿಸಿದಂತೆ 3 ತಿಂಗಳ ಕಳೆದರೂ ಕೂಡ eóÉಕ್ ರಿಪಬ್ಲಿಕ್ ದೇಶದಿಂದ ಜೇಮ್ಸ್‍ಗೆ ಯಾವುದೇ ವೀಸಾ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀನಾಥ್‍ನನ್ನು ಜೇಮ್ಸ್ ಜೋಸೆಫ್ ಅವರು ಸಂಪರ್ಕಿಸಿದ ಸಂದರ್ಭ eóÉಕ್ ರಿಪಬ್ಲಿಕ್ ದೇಶದಲ್ಲಿ ಉದ್ಯೋಗ ದೊರಕಿಸಲು ಸಾಧ್ಯವಾಗಿಲ್ಲ. ಆದರೆ 2022ರ ಮಾರ್ಚ್ ಅಂತ್ಯದೊಳಗೆ ಪೋರ್ಚ್‍ಗಲ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಶ್ರೀನಾಥ್ ತಿಳಿಸಿದ್ದಲ್ಲದೇ, 2022ರ ಸೆಪ್ಟೆಂಬರ್ ಕೊನೆಯಲ್ಲಿ ವೀಸಾ ಬರಲಿದೆ. ಇಲ್ಲವಾದಲ್ಲಿ ಹಣ ಹಿಂದಿರುಗಿಸುವುದಾಗಿ ಆಶ್ವಾಸನೆ ನೀಡಿದ್ದ. ಆದರೆ ಸೆಪ್ಟೆಂಬರ್ ಕಳೆದರೂ ವೀಸಾ ಬಾರದ ಕಾರಣ ಶ್ರೀನಾಥ್ ನೀಡಿದ್ದ ಎಲ್ಲಾ ಭರವಸೆಗಳು ಹುಸಿಯಾಗಿದ್ದವು.

ಈ ಹಿನ್ನೆಲೆಯಲ್ಲಿ ಧರ್ಮಗುರುಗಳ ಮೂಲಕ ಶ್ರೀನಾಥ್ ಅವರ ಮನೆಗೆ ತೆರಳಿದ್ದ ಜೇಮ್ಸ್ ಜೋಸೆಫ್ ನಡೆದ ವಿಚಾರವನ್ನು ಶ್ರೀನಾಥ್‍ನ ಪತ್ನಿಗೆ ತಿಳಿಸಿದ್ದರು. ಆದರೆ ಅವರಿಂದ ಸಕಾರಾತ್ಮಕ ಉತ್ತರ ದೊರೆಯದೇ ಬಳಿಕ ಶ್ರೀನಾಥ್ ಜೊತೆ ಮನೆಗೆ ಬಂದಿದ್ದ ವಿನೋದ್ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ದೂರು ದಾಖಲು: ಈ ಎಲ್ಲಾ ವಿಚಾರಗಳಿಂದ ತಾನು ಮೋಸ ಹೋಗಿರುವುದಾಗಿ ಅರಿತ ಜೇಮ್ಸ್ ಜೋಸೆಫ್ 2022ರ ಅಕ್ಟೋಬರ್ 29ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಂ.ಹೆಚ್.ಶ್ರೀನಾಥ್ ಮತ್ತು ವಿನೋದ್ ಅವರ ವಿರುದ್ದ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿರುವ ಕುರಿತು ದೂರು ದಾಖಲಿಸಿದ್ದರು. ಮೊ.ಸಂಖ್ಯೆ 137/2022ರ ಅಡಿ ದೂರು ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ದ 417, 420 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.