ಚುನಾವಣಾ ವೆಚ್ಚಕ್ಕೆ 10 ಲಕ್ಷ ಹಣವನ್ನೂ ಕೊಟ್ಟು ಹರೀಶ್‍ಗೌಡರ ಬೆಂಬಲಕ್ಕೆ ನಿಂತ ಕಾಡನಕೊಪ್ಪಲು ಗ್ರಾಮಸ್ಥರು!

ಹುಣಸೂರು, ಫೆ.15- ರಾಜಕಾರಣ ದಲ್ಲಿ ಹಣ ಹಂಚಿ ಮತ ಗಳಿಸುವುದು, ಅಧಿಕಾರ ಹಿಡಿಯುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದರೆ, ಮತದಾರರೇ ತಾವು ಒಪ್ಪಿದ ರಾಜಕಾರಣಿಗೆ ಚುನಾವಣಾ ಖರ್ಚಿಗೆ ಹಣ ಹೊಂದಿಸಿ ಕೊಡುವುದರ ಜೊತೆಗೆ ಚುನಾವಣೆಯಲ್ಲಿ ಅವರ ಬೆಂಬಲಕ್ಕೆ ನಿಲ್ಲುವಂತಹ ವಿಚಾರ ಅಪರೂಪದಲ್ಲಿ ಅಪರೂಪವಲ್ಲವೇ!? ಇಂತಹ ಒಂದು ವಿದ್ಯಮಾನ ಹುಣ ಸೂರು ತಾಲೂಕಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದ ಮುಖಂಡರು ಜಾತ್ಯಾತೀತ ಜನತಾದಳ ಅಭ್ಯರ್ಥಿ ಜಿ.ಡಿ.ಹರೀಶ್‍ಗೌಡರಿಗೆ 10 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ತಾಲೂಕಿನ ಮೂಕನಹಳ್ಳಿಯಲ್ಲಿ ಇಂದು ರಾತ್ರಿ ನಡೆದ ಜೆಡಿಎಸ್ ಸೇರ್ಪಡೆ ಕಾರ್ಯ ಕ್ರಮದಲ್ಲಿ ಕಾಡನಕೊಪ್ಪಲು ಗ್ರಾಮದ ಮುಖಂಡರಾದ ಜಯಣ್ಣ, ಅರ್ಜುನ, ಕನಕರಾಜು, ರೇವಣ್ಣ, ರವಿ ಸೇರಿದಂತೆ ಹಲವರು ತಮ್ಮ ಗ್ರಾಮದಲ್ಲಿ ಸಂಗ್ರಹಿಸಿದ ದೇಣಿಗೆ ಹಣವನ್ನು ಹರೀಶ್‍ಗೌಡರಿಗೆ ನೀಡಿದ್ದಾರೆ. ಇದೇ ವೇಳೆ ನಾವು ನಿಮ್ಮೊಂದಿ ಗಿದ್ದೇವೆ. ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ಗ್ರಾಮದ ಮಾಜಿ ಯಜಮಾನ ಜಯಣ್ಣ, ಚುನಾ ವಣೆ ಬಂತೆಂದರೆ ರಾಜಕಾರಣಿಗಳ ಮನೆ ಬಾಗಿಲಲ್ಲಿ ನಿಂತು ಹಣ ಕೇಳುವುದಲ್ಲ. ಇತ್ತೀಚೆಗೆ ಜನ ಹಾಗೆಯೇ ತಿಳಿದಿದ್ದಾರೆ. ಇದು ಧರ್ಮವಲ್ಲ. ದೇವರು ಒಪ್ಪುವಂತಹ ಮಾರ್ಗವಲ್ಲ. ನಮಗೆ ಈಗ ಬೇಕಾದವರು ಜಿ.ಡಿ. ಹರೀಶ್‍ಗೌಡರು. ಅವರನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆ ವೆಚ್ಚಕ್ಕಾಗಿ ನಮ್ಮ ಗ್ರಾಮಸ್ಥರಿಂದ ದೇಣಿಗೆಯನ್ನು ಸಂಗ್ರಹಿಸಿ 10 ಲಕ್ಷ ರೂ.ಗಳನ್ನು ನೀಡು ತ್ತಿದ್ದೇವೆ. ಹರೀಶ್‍ಗೌಡರಿಂದ ನಮಗೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎಂಬ ಅಪಾರ ವಿಶ್ವಾಸವಿದೆ. ಈ ಕ್ಷೇತ್ರದ ಹಾಲಿ ಶಾಸಕರು 15 ವರ್ಷದಿಂದ ಅಭಿವೃದ್ಧಿ ಯನ್ನೇ ಮಾಡದೇ ಇರುವುದು ನಮಗೆ ಬೇಸರ ತಂದಿದೆ. ಹಾಗಾಗಿ ಈ ಬಾರಿ ಹರೀಶ್‍ಗೌಡರಿಗೆ ಹಣವನ್ನೂ ಕೊಟ್ಟು, ಮತವನ್ನೂ ನೀಡಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ದೇಣಿಗೆ ಸ್ವೀಕರಿಸಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‍ಗೌಡ, ಹಣ ಇಲ್ಲದೆ ರಾಜಕಾರಣ ಮಾಡು ವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಇಲ್ಲಿ ಜನರೇ ನನ್ನ ಮೇಲೆ ನಂಬಿಕೆ ಇರಿಸಿ ಹಣವನ್ನು ಸಂಗ್ರಹಿಸಿ ನನಗೆ ನೀಡುವ ಮೂಲಕ ಅಪಾರ ಪ್ರೀತಿ-ವಿಶ್ವಾಸ ತೋರಿ ಸಿದ್ದಾರೆ. ಇದರಿಂದ ನನಗೆ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಜನರ ಸೇವೆ ಮಾಡುವ ಉತ್ಸಾಹ ಇಮ್ಮಡಿಯಾಗಿದೆ. ಈ ಕ್ಷಣವನ್ನು ನನ್ನ ಜೀವ ಇರುವವ ರೆಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಸು, ಮುಖಂಡರಾದ ಹರವೆ ಶ್ರೀಧರ್, ಸಂದೇಶ್, ಸತೀಶ್ ಪಾಪಣ್ಣ, ಗೋವಿಂದೇಗೌಡ, ಬಲರಾಮ, ಹಳ್ಳಿಮನೆ ರವಿ, ಸುದೀಪ್ ಸೇರಿದಂತೆ ಹಲವರು ಮುಖಂಡರು ಹಾಜರಿದ್ದರು.