ಸಾಲಗಾರರ ಕಾಟ: ವ್ಯಕ್ತಿ ಆತ್ಮಹತ್ಯೆ ಪತ್ನಿಯಿಂದ ಪೊಲೀಸರಿಗೆ ದೂರು

ಮೈಸೂರು: ಸಾಲಗಾರರ ಕಾಟದಿಂದ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದವಗಿರಿಯಲ್ಲಿ ನಡೆದಿದೆ.

ಇಲ್ಲಿನ ಜೆರೇನಿಯಂ ಬ್ಲಾಕ್‍ನ ಸಂಕಲ್ಪ ಅಪಾರ್ಟ್‍ಮೆಂಟ್ ನಿವಾಸಿ ಓಂಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡವರು. ಇವರು, ಜು.17ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರದಲ್ಲಿ ಓಂಪ್ರಕಾಶ್‍ರವರ ಪತ್ನಿ ವರ್ಷರವರು ಪತಿಯ ಮೊಬೈಲ್ ಪರಿಶೀಲಿಸಿದಾಗ ಓಂಪ್ರಕಾಶ್, ಆತ್ಮಹತ್ಯೆಗೂ ಮುನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿದ್ದು, ಅದರಲ್ಲಿ ಲೇವಾದೇವಿದಾರರಾದ ರಾಜೇಶ್ ಸೇರಿದಂತೆ ಮತ್ತಿತರರಿಂದ ಸಾಲ ಮಾಡಿದ್ದು, ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಒತ್ತಾಯ ಮಾಡಿದ್ದರು. ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ಸಾವಿನ ರಹಸ್ಯ ತಿಳಿಸಿ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಪತ್ನಿ ವರ್ಷ, ಆತ್ಮಹತ್ಯೆಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.