ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಿದ್ದ ಮಹಿಳೆ: ಕೂಡಲೇ ಮನೆ ಒತ್ತುವರಿ ತೆರವು

ಬೆಂಗಳೂರು: ಜನತಾ ದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡದಿಂದ ಬಂದಿದ್ದ ಗಿರಿನಗರದ ಕನ್ನಿಯಮ್ಮ ಇಂದು ಮಂದಹಾಸ ಬೀರುತ್ತಿದ್ದರು.

ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನು ಸ್ವಾಧೀನ ಪಡಿಸಿಕೊಂಡು, ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು.

ಸೆಪ್ಟೆಂಬರ್1 ರಂದು ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನೆ ವಾಪಸ್ ಕೊಡಿಸುವಂತೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಕೂಡಲೇ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿ ಮನೆ ಒತ್ತುವರಿ ತೆರವುಗೊಳಿಸಿ ಮಹಿಳೆಗೆ ರಕ್ಷಣೆ ಒದಗಿಸುವಂತೆ ಸೂಚಿಸಿದ್ದರು. ಅದರಂತೆ ಪೊಲೀಸರು ಕ್ರಮವಹಿಸಿ ಕನ್ನಿಯಮ್ಮನಿಗೆ ನ್ಯಾಯ ಒದಗಿಸಿದರು.

ಇಂದು ಆಕೆ ಕೃಷ್ಣಾದಲ್ಲಿ ಬಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹಾಗೂ ಡಿಸಿಪಿ ಶರಣಪ್ಪ ಈ ವೇಳೆ ಹಾಜರಿದ್ದರು.