ನ್ಯಾಯಾಲಯ ಕಲಾಪಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಜಾಗೃತಿ ಸಮಿತಿ ಮನವಿ

ಮೈಸೂರು,ಫೆ.27(ಎಸ್‍ಪಿಎನ್)-ಮೈಸೂರು ಜಿಲ್ಲಾ ನ್ಯಾಯಾಲಯಗಳ ಕಾರ್ಯಕಲಾಪ ಗಳಲ್ಲಿ ಕನ್ನಡ ಅನುಷ್ಠಾನಗೊಳಿಸಲು ಸಹಕರಿಸುವಂತೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಜಿಲ್ಲಾ ವಕೀಲರ ಸಂಘದ ಕಾರ್ಯಾಲಯಕ್ಕೆ ತೆರಳಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2020-21ನೇ ಸಾಲಿನಲ್ಲಿ ಕನ್ನಡ ಕಾಯಕ ವರ್ಷಾ ಚರಣೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮೈಸೂರು ನ್ಯಾಯಾಲಯದ ಆವರಣದಲ್ಲಿ ವಕೀಲರ ಸಹಯೋಗದೊಂದಿಗೆ ಜಾಗೃತಿ ಮೂಡಿಸಿದ್ದಾರೆ. ಭಾರತ ಸಂವಿಧಾನ ಸಮಿತಿಯ ಸಾಂವಿಧಾನಿಕ ಸಲಹೆಗಾರರಾಗಿದ್ದ ಮಂಗಳೂರಿನ ಸರ್ ಬೆನಗಲ್ ನರಸಿಂಗರಾವ್ ಜನ್ಮದಿನ ಪ್ರಯುಕ್ತ ಅವರ ಸೇವೆಯನ್ನು ಪರಿಚಯಿಸಿದರು. ನ್ಯಾಯಾಲಯದ ಕಾರ್ಯ ಚಟುವಟಿಕೆಗಳು ಪೂರ್ಣ ಕನ್ನಡದಲ್ಲೇ ವ್ಯವಹರಿಸುವಂತೆ ಮನವಿ ಮಾಡಿದ್ದಾರೆ. ನಂತರ ಜಿಲ್ಲಾ ನ್ಯಾಯಾಧೀಶರು, ಮುಖ್ಯ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ, ಕನ್ನಡ ಅನುಷ್ಠಾನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಉಪಾಧ್ಯಕ್ಷ ಶಿವಣ್ಣೇಗೌಡ, ಕಾರ್ಯದರ್ಶಿ ಬಿ.ಶಿವಣ್ಣ, ವಕೀಲರ ಗೃಹನಿರ್ಮಾಣ ಸಂಘದ ಅಧ್ಯಕ್ಷ ಲೋಕೇಶ್‍ಗೌಡ, ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯೆ ಅನಿತಾ ಎ.ಜೋಷಿ ಮತ್ತು ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್.ನಾಗ ರಾಜ್, ಅರವಿಂದ್ ಶರ್ಮ, ಸಾತನೂರು ದೇವರಾಜ್, ಮುಳ್ಳೂರು ನಂಜುಂಡಸ್ವಾಮಿ, ಎನ್.ಜಿ.ಗಿರೀಶ್, ಸೌಗಂಧಿಕಾ ವಿ.ಜೋಯಿಸ್, ಭೇರ್ಯ ರಾಮಕುಮಾರ್ ಉಪಸ್ಥಿತರಿದ್ದರು.