ಮೈಸೂರಿನ ಹೋಟೆಲ್‍ನಲ್ಲಿ ಬೆಂಗಳೂರು ಉದ್ಯಮಿ ಆತ್ಮಹತ್ಯೆ

ಮೈಸೂರು,ಜ.11(ಎಂಕೆ)-ವ್ಯವಹಾರದಲ್ಲಾದ ನಷ್ಟದಿಂದ ಕಿನ್ನತೆಗೊಳಗಾದ ಬೆಂಗಳೂರಿನ ಉದ್ಯಮಿಯೊಬ್ಬರು ಮೈಸೂರಿನ ಖಾಸಗಿ ಹೋಟೆಲೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಬೆಂಗಳೂರಿನ ಯಲಹಂಕ ನಿವಾಸಿ ಬಸವರಾಜಪ್ಪ(55) ಆತ್ಮಹತ್ಯೆ  ಮಾಡಿಕೊಂಡ ವರು. ಷೇರು ಮಾರುಕಟ್ಟೆ ಮತ್ತು ಇನ್ನಿತರೆ ವ್ಯವಹಾರದಲ್ಲಿ ಉಂಟಾದ ನಷ್ಟದಿಂದಾಗಿ ಮನನೊಂದ ಇವರು 3 ದಿನಗಳ ಹಿಂದೆಯೇ ಮನೆ ಬಿಟ್ಟು ಮೈಸೂರಿನ ಲಷ್ಕರ್ ಮೊಹಲ್ಲಾದ ಬೆಂಗಳೂರು-ಮೈಸೂರು ನೀಲಗಿರಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ರಾತ್ರಿ ಸುಮಾರು 11 ಗಂಟೆಯಲ್ಲಿ ತಮ್ಮ ಹೆಂಡತಿಗೆ ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ವಾಟ್ಸ್‍ಆ್ಯಪ್ ಮಾಡಿದ್ದಾರೆ. ಅಲ್ಲದೆ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್‍ನೋಟ್ ಬರೆದಿಟ್ಟು ತಾವು ತಂಗಿದ್ದ ಹೋಟೆಲ್‍ನ ರೂಂನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.