ತರಕಾರಿಯೊಂದಿಗೆ ಗೋಮಾಂಸ ಸಾಗಣೆ; ಆರೋಪಿ ಪೊಲೀಸ್ ವಶಕ್ಕೆ

ಮಡಿಕೇರಿ, ಏ.22- ಹೊರ ಜಿಲ್ಲೆಗ ಳಿಂದ ಕೊಡಗು ಜಿಲ್ಲೆಗೆ ತರಕಾರಿ ತರಲು ಜಿಲ್ಲಾಡಳಿತ ನೀಡಿದ್ದ ಪಾಸ್‍ಗಳನ್ನು ದುರುಪಯೋಗ ಪಡಿಸಿಕೊಂಡು ತರಕಾರಿ ವಾಹನದಲ್ಲಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಮತ್ತು ಗೋ ಮಾಂಸ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆಲ್ಯಹುದಿಕೇರಿಯ ಮುಸ್ತಫಾ ಎಂಬಾತ ತನ್ನ ಜೀಟೋ ವಾಹನ(ಕೆ.ಎ.12-ಬಿ.3948) ದಲ್ಲಿ ತರಕಾರಿ ತರಲು ಪಾಸ್ ಪಡೆದು ಹುಣಸೂರಿಗೆ ತೆರಳಿದ್ದ. ಬಳಿಕ ಅಲ್ಲಿಂದ ಬರುವಾಗ ತರಕಾರಿ ಸಹಿತ 25 ಕೆ.ಜಿ. ಗೋಮಾಂಸವನ್ನು ತರಕಾರಿ ಪೆಟ್ಟಿಗೆಯ ಕೆಳಗಡೆ ಇಟ್ಟು ಮಾಲ್ದಾರೆ ಚೆಕ್ ಪೋಸ್ಟ್ ಮೂಲಕ ನೆಲ್ಲಿಹುದಿಕೇರಿಗೆ ಬರುತ್ತಿದ್ದ. ಇಂದು ಬೆಳಗಿನ 4 ಗಂಟೆಯ ಸಮಯ ದಲ್ಲಿ ಚೆಕ್ ಪೋಸ್ಟ್‍ನಲ್ಲಿ ತರಕಾರಿ ವಾಹನ ವನ್ನು ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭ ತರಕಾರಿ ಟ್ರೇಗಳ ಅಡಿಯಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿರುವುದು ಪತ್ತೆಯಾಗಿದೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದಾರೆ. ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.