ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವಕ ಸಾವು

ಮೈಸೂರು,ಜ.31(ಆರ್‍ಕೆ)-ವಿದ್ಯುತ್ ಕಂಬಕ್ಕೆ ಬೈಕೊಂದು ಡಿಕ್ಕಿ ಹೊಡೆದ ಪರಿ ಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಉನ್ನತಿನಗರ ಬಳಿ ರಿಂಗ್ ರಸ್ತೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮೈಸೂರಿನ ಕೂರ್ಗಳ್ಳಿ ನಿವಾಸಿ ಲೇಟ್ ನರಸಿಂಹ ಅವರ ಮಗ ಪಾಂಡುರಂಗ(26) ದುರಂತ ಸಾವಿಗೀಡಾದವರು. ಮೂಲತಃ ಕೆ.ಆರ್.ನಗರ ತಾಲೂಕು, ತಿಪ್ಟೂರು ಗ್ರಾಮದವರಾದ ಆತ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಹೀರೋ ಹೋಂಡಾ ಪ್ಯಾಷನ್ ಪ್ರೋ(ಕೆಎ45, ವಿ.9941) ಬೈಕಿನಲ್ಲಿ ಬೆಲವತ್ತ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉನ್ನತಿ ನಗರ ಬಳಿ ರಿಂಗ್ ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಭಾನುವಾರ ರಾತ್ರಿ 11.30 ಗಂಟೆಯಲ್ಲಿ ಅನಾಹುತ ಸಂಭವಿಸಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಪಾಂಡುರಂಗ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರಕರಣ ದಾಖ ಲಿಸಿಕೊಂಡಿರುವ ಎನ್.ಆರ್. ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ಹೂಟಗಳ್ಳಿಯಲ್ಲಿರುವ ಮಾಸ್ ಫರ್ನಿಚರ್ಸ್ ಘಟಕದಲ್ಲಿ ಪಾಲಿಷ್ ಮಾಡುವ ಕೆಲಸ ಮಾಡುತ್ತಿದ್ದ ಪಾಂಡುರಂಗ, ಭಾನುವಾರ ರಾತ್ರಿ 8.30 ಗಂಟೆ ವೇಳೆಗೆ ಹೆಬ್ಬಾಳಿನ ಸೂರ್ಯಬೇಕರಿ ಸರ್ಕಲ್ ಬಳಿ ಊಟ ಮಾಡಿ ಮನೆಗೆ ಹೋಗುತ್ತೇ ನೆಂದು ಸ್ನೇಹಿತರಿಗೆ ಹೇಳಿದ್ದ ಆತ ಅಲ್ಲಿಂದ ಮೈಸೂರು-ಬೆಂಗಳೂರು ಹೆದ್ದಾರಿಗೆ ಏಕೆ ಹೋಗಿದ್ದರೆಂಬುದು ತಿಳಿದಿಲ್ಲ. ಸ್ಥಳಕ್ಕೆ ತೆರಳಿದ ಎನ್.ಆರ್.ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪಾಂಡುರಂಗ ಅವರ ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಿದರು.