ಚೈತ್ರ ಆನೆಯ ಮಾವುತ ಮಹದೇವುಗೆ ಕಡೆಯ ದಸರಾ

ಮೈಸೂರು: ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹೆಜ್ಜೆ ಹಾಕಿದ ಸೌಮ್ಯ ಸ್ವಭಾವದ ಚೈತ್ರ ಆನೆಯ ಮಾವುತರಾಗಿ ಯಶಸ್ವಿಯಾಗಿ ಮುನ್ನಡೆಸಿದ ಮಹದೇವು ಅವರಿಗೆ ಇದು ಕಡೆಯ ದಸರಾ.

ಐದಾರು ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಅರಣ್ಯ ಇಲಾಖೆಯ ಸಾಕಾನೆಗಳಿಗೆ ಮಾವುತರಾಗಿ ಸೇವೆಸಲ್ಲಿಸುತ್ತಿರುವ ಮಹದೇವು ಅವರು ಕಳೆದ ಐದಾರು ವರ್ಷದಿಂದ ಚೈತ್ರ ಆನೆಗೆ ಮಾವುತರಾಗಿ ನಿಯೋ ಜನೆಗೊಂಡಿದ್ದರು. ಬಂಡೀಪುರ ಕ್ಯಾಂಪಸ್‍ನಲ್ಲಿರುವ ಕ್ವಾಟರ್ಸ್ನಲ್ಲಿ ವಾಸವಿದ್ದಾರೆ. ಗಂಗೆ ಆನೆಯ ಮಗಳಾಗಿರುವ ಚೈತ್ರ ಇದುವರೆಗೂ 12 ಮರಿಗಳಿಗೆ ಜನ್ಮ ನೀಡಿದೆ. ಹಲವು ಆನೆಗಳಿಗೆ ಮಹದೇವು ಅವರು ಆರೈಕೆ ಮಾಡಿದ್ದಾರೆ. ಕೊನೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಕ್ಯಾಂಪ್‍ನಲ್ಲಿರುವ ಚೈತ್ರ ಆನೆ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ದಸರಾದಿಂದ(ಮರಿಗೆ ಜನ್ಮ ನೀಡಿದ್ದ ಕಾರಣ) ದೂರವುಳಿದಿದ್ದ ಚೈತ್ರ ಆನೆಯನ್ನು ಈ ಬಾರಿ ಕರೆತರಲಾಗಿತ್ತು. ಆದರೆ ಸಿಡಿಮದ್ದಿನ ಶಬ್ದಕ್ಕೆ ಬೆದರುತ್ತಿದ್ದ ಹಿನ್ನೆಲೆಯಲ್ಲಿ ಸಾಲಾನೆಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತು.