ಡಿ. 20, 27ರಂದು ರಂಗಾಯಣದಲ್ಲಿ `ಚಿರೇಬಂದಿ ವಾಡೆ’ ನಾಟಕ ಪ್ರದರ್ಶನ

ಮೈಸೂರು,ಡಿ.16-ಪ್ರಬುದ್ಧತೆಯ ಪ್ರದರ್ಶನ, ತುಂಬಿದ ರಂಗಮಂದಿರ, ಎದ್ದು ನಿಂತು ದೀರ್ಘ ಚಪ್ಪಾಳೆ. ಇದು ಕಳೆದ ಭಾನುವಾರ ರಂಗಾಯಣದ ವಾರಾಂತ್ಯ ನಾಟಕದಲ್ಲಿ ಕಂಡುಬಂದ ದೃಶ್ಯ. ಮಾರ್ಚ್ 5ರಂದು ಮಣಿಪುರದಲ್ಲಿ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನ ನೀಡಿದ ನಂತರ ರಂಗಾ ಯಣ ಪ್ರಧಾನ ರೆಪರ್ಟರಿ ತನ್ನ ಪೂರ್ಣ ಪ್ರಮಾಣ ನಾಟಕ ಪ್ರದರ್ಶನ ನೀಡಿರ ಲಿಲ್ಲ. ಇದಕ್ಕೆ ಕೋವಿಡ್-19ರ ಕಾರಣವಾಗಿತ್ತು.

‘ಪರ್ವ’ ನಾಟಕದ ತಾಲೀಮಿನ ನಡುವೆ 2008ರಲ್ಲಿ ಸಿದ್ಧಗೊಂಡು ರಂಗಾಯಣ ಪ್ರದರ್ಶನ ನೀಡಿದ್ದ ‘ಚಿರೇಬಂದಿ ವಾಡೆ’ ನಾಟಕ 2020 ಡಿ.13ರಂದು ಮತ್ತೆ ಭೂಮಿ ಗೀತ ರಂಗಮಂದಿರದಲ್ಲಿ ಪ್ರದರ್ಶನಗೊಂ ಡಿತ್ತು. ಮಾಗಿದ ಕಲಾವಿದರ ಪ್ರಬುದ್ಧತೆ ಮೆರೆದ ಈ ಪ್ರದರ್ಶನಕ್ಕೆ ರಂಗಮಂದಿರ ತುಂಬಿತ್ತು. 3 ಗಂಟೆಗಳ ವಾಸ್ತವವಾದಿ ಈ ನಾಟಕದ ಓಘವೇ ವೀಣೆ ಮೀಟಿದಂತೆ. ಶ್ರದ್ಧೆ, ಶಿಸ್ತು ಕುತೂಹಲದಿಂದ ನಾಟಕ ವೀಕ್ಷಿಸಿದ ಪ್ರೇಕ್ಷಕರು ನಾಟಕ ಮುಗಿದ ನಂತರ ದೀರ್ಘ ಚಪ್ಪಾಳೆ ನೀಡಿ, ಅಭಿನಂದಿಸಿ ದರು. ನಮ್ಮನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದ ಪ್ರೇಕ್ಷಕರಿಗೆ ರಂಗಾಯಣ ಕೃತಜ್ಞತೆ ಸಲ್ಲಿಸುತ್ತದೆ. ವಾರಾಂತ್ಯ ನಾಟಕವನ್ನು ಆರಂಭಿಸಿದ ನಮ್ಮ ದೃಢ ನಿರ್ಧಾರ ಫಲಕೊಟ್ಟಿದೆ. ಕೋವಿಡ್-19ರ ನಿಯಂತ್ರಣದ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾ ರಂಗಾಯಣದಲ್ಲಿ ಚಟುವಟಿಕೆ ನಡೆದಿದೆ. ‘ಚಿರೇಬಂದಿ ವಾಡೆ’ ನಾಟಕದ ವಾರಾಂತ್ಯದಲ್ಲಿ ಮರುಪ್ರದರ್ಶನ ಡಿ.20 ಮತ್ತು 27ರಂದು ಏರ್ಪಡಿಸಿದೆ.