ಉದ್ದೇಶಿತ ಭಾಷಾ ವಿವಿಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವೀಲಿನ ಬೇಡ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ ಕನ್ನಡ ಕ್ರಿಯಾ ಸಮಿತಿ

ಮೈಸೂರು,ಮಾ.15(ಪಿಎಂ)- ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ವನ್ನು (ಸಿಐಐಎಲ್) ಭಾರತೀಯ ಭಾಷಾ ವಿವಿಯಾಗಿ ಪರಿವರ್ತಿಸಿ, ಅದರಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸೇರ್ಪಡೆಗೊಳಿಸುವ ಪ್ರಸ್ತಾಪವಿದೆ. ಯಾವುದೇ ಕಾರಣಕ್ಕೂ ಸದರಿ ಕೇಂದ್ರವನ್ನು ಉದ್ದೇಶಿತ ವಿವಿಯಲ್ಲಿ ವಿಲೀನಗೊಳಿಸದಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮಾಜಿ ಮುಖ್ಯ ಮಂತ್ರಿಗಳೂ ಆದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕನ್ನಡ ಕ್ರಿಯಾ ಸಮಿತಿ ನಿಯೋಗ ಮನವಿ ಸಲ್ಲಿಸಿದೆ. ಉದ್ದೇಶಿತ ವಿವಿಯಲ್ಲಿ ಸದರಿ ಸಂಸ್ಥೆ ವಿಲೀನಗೊಳಿಸುವುದಿಲ್ಲ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ಇತ್ತೀಚೆಗಿನ ಕೆಲ ಬೆಳವಣಿಗೆಗಳು ಇದಕ್ಕೆ ವ್ಯತಿರಿಕ್ತ ವಾಗಿವೆ. ಈ ವಿಲೀನ ಪ್ರಸ್ತಾಪದ ಸಂಬಂಧ ಈಗಾಗಲೇ ಮೈಸೂರಿನ ಕನ್ನಡ ಪರ ಸಂಘಟನೆಗಳು, ಚಿಂತಕರು, ಸಾಹಿತಿಗಳು, ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೈಸೂರಿನ ಎಲ್ಲಾ ಜನಪ್ರತಿನಿಧಿಗಳನ್ನೂ ಭೇಟಿ ಮಾಡಿ, ಈ ಪ್ರತಿಷ್ಠಿತ ಸಂಸ್ಥೆಯನ್ನು ಸ್ವಾಯತ್ತವಾಗಿ ಉಳಿಸಿ ಕೊಳ್ಳುವಂತೆ ಒತ್ತಾಯಿಸಲಾಗಿದೆ. ಹೀಗಾಗಿ ಸದರಿ ಸಂಸ್ಥೆಯನ್ನು ಸ್ವಾಯತ್ತವಾಗಿಸಲು ತಾವು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿಯಲ್ಲಿ ಕೋರಲಾಗಿದೆ. ಮನವಿ ಸ್ವೀಕರಿಸಿ, ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ವಿಧಾನಸಭಾ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ ಆಶ್ವಾಸನೆ ನೀಡಿದರು. ಕನ್ನಡ ಕ್ರಿಯಾ ಸಮಿತಿಯ ಸ.ರ.ಸುದರ್ಶನ್, ಹಿರಿಯ ಸಮಾಜವಾದಿ ಪ.ಮಲ್ಲೇಶ್, ಬರಹಗಾರ ನಾ.ದಿವಾಕರ ಇತರರನ್ನು ಒಳಗೊಂಡ ನಿಯೋಗ ಮನವಿ ಸಲ್ಲಿಸಿತು.