ಮೈಸೂರು, ಜು.12(ಆರ್ಕೆ)- ಕೃಷ್ಣರಾಜಸಾಗರ ಜಲಾಶಯದ ದಕ್ಷಿಣ ದ್ವಾರದ ಬಳಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ಸಂಸ್ಥಾನದಲ್ಲಿ ದಿವಾನರಾಗಿದ್ದ ಅಂದಿನ ಚೀಫ್ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ.
ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ ಅಣೆಕಟ್ಟೆ) ನಿರ್ಮಿಸಿ ಮಂಡ್ಯ ಜಿಲ್ಲೆಯ ಬರಡು ಭೂಮಿಗೆ ನೀರು ಹರಿಸಿ, ಅಲ್ಲಿನ ಜನರ ಬದುಕು ಹಸನಾಗಿ ಸಿದ ಹಾಗೂ ಮೈಸೂರು, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕಲ್ಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರ ಸ್ಮರಣೆಗಾಗಿ ಕೆಆರ್ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದಲ್ಲಿ ಪ್ರತಿಮೆ ಸ್ಥಾಪಿಸಲು ಕಾವೇರಿ ನೀರಾವರಿ ನಿಗಮ ನಿಯಮಿತವು ನಿರ್ಧರಿಸಿತ್ತು. ಅದರಂತೆ ಈಗಾಗಲೇ ಎರಡೂ ಮಂಟಪಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೈಸೂ ರಿನ ಕೆ.ಆರ್. ಸರ್ಕಲ್ನಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮಂಟಪವನ್ನೇ ಹೋಲು ವಂತೆ ಕೆಆರ್ಎಸ್ನಲ್ಲೂ ಈ ಇಬ್ಬರು ಮಹನೀಯರ ಪ್ರತಿಮೆಗಳಿಗೆ ಮಂಟಪಗಳನ್ನು ನಿರ್ಮಿಸಲಾಗಿದೆ. ಪ್ರತಿಮೆ, ಮಂಟಪ ನಿರ್ಮಾಣದ ಗುತ್ತಿಗೆ ಪಡೆದಿ ರುವ ರಮೇಶ್ ಎಂಬುವರು ನಾಲ್ವಡಿ ಮತ್ತು ಸರ್ ಎಂವಿ ಅವರ ಆಳೆತ್ತರದ ಪ್ರತಿಮೆ ಕೆತ್ತಲು ರಾಜಸ್ತಾನದ ಶಿಲ್ಪಿಗೆ ಜವಾಬ್ದಾರಿ ಒಪ್ಪಿಸಿದ್ದಾರೆ. ಕೃಷ್ಣರಾಜ ಒಡೆ ಯರ್ ಪ್ರತಿಮೆ ಕೆತ್ತನೆ ಕಾರ್ಯ ಬಹುತೇಕ ಮುಗಿ ದಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಕೆಲಸ ಈಗಷ್ಟೇ
ಆರಂಭವಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಎರಡು ವರ್ಷಗಳ ಕಾಲ ಲಾಕ್ಡೌನ್, ಸೆಮಿ ಲಾಕ್ಡೌನ್, ವೀಕೆಂಡ್ ಕಫ್ರ್ಯೂನಂತಹ ನಿರ್ಬಂಧದಿಂದಾಗಿ ಪ್ರತಿಮೆಗಳು ಮತ್ತು ಮಂಟಪಗಳ ಕೆಲಸ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಭರದಿಂದ ಸಾಗಿದ್ದು, ಇನ್ನೆರಡು ತಿಂಗಳೊಳಗಾಗಿ ಮುಗಿಸುವುದಾಗಿ ತಿಳಿಸಿದರು. ರಾಜವಂಶದ ಪ್ರಮೋದಾದೇವಿ ಒಡೆಯರ್ ಅವರ ಮಾರ್ಗದರ್ಶನ, ಸಲಹೆಯಂತೆ ನಾಲ್ವಡಿ ಮತ್ತು ಸರ್ ಎಂವಿ ಅವರ ಪ್ರತಿಮೆಗಳನ್ನು ಕೆತ್ತಲಾಗುತ್ತಿದ್ದು, ಎರಡೂ ಮಂಟಪಗಳಡಿ ಮಹನೀಯರ ಪರಿಚಯ, ಸಾಧನೆ, ಅಣೆಕಟ್ಟೆ, ಬೃಂದಾವನದ ಇತಿಹಾಸದ ಬಗ್ಗೆ ಚಿತ್ರ ಸಮೇತ ಮಾಹಿತಿ ಒಳಗೊಂಡ ಮ್ಯೂಸಿಯಂ ಮಾಡಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಟಪ ನಿರ್ಮಾಣ ಜೊತೆಗೆ ಮಾರ್ಬಲ್ನಿಂದ ಮಾಡಿದ ಇಬ್ಬರ ಪ್ರತಿಮೆ ಸಿದ್ಧಪಡಿಸಲು 8.5 ಕೋಟಿ ರೂ. ಕಾಮಗಾರಿ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರ ರಮೇಶ್, ನಾಲ್ವಡಿ ಮತ್ತು ಸರ್ ಎಂವಿ ಪ್ರತಿಮೆಗಳನ್ನು ಸಿದ್ಧಪಡಿಸಲು ಜೈಪುರ್ನ ಶಿಲ್ಪಿಯೊಬ್ಬರಿಗೆ ಜವಾಬ್ದಾರಿ ವಹಿಸಿದ್ದಾರೆ.