ಸ್ವಾರಸ್ಯ, ಅರ್ಥಗರ್ಭಿತ ಪುಟ್ಟ ಕಥೆ ಮೂಲಕ 3ನೇ ಸಂಚಿಕೆಯಲ್ಲಿ ಕೊರೊನಾ ಕಡಿವಾಣದ ರಾಮಬಾಣ

ಸಾಮಾಜಿಕ ಅಂತರದ ಮಹತ್ವ ವಿವರಿಸುವ ಚೇತನಾ!
ಮೈಸೂರು, ಮೇ.2(ಎಂಕೆ)- ಕೊರೊನಾ ವೈರಸ್‍ಗೆ ಕಡಿವಾಣ ಹಾಕಲು ಐದು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯ. ಆದರೆ ಅಂತರ ನಮ್ಮ ನಮ್ಮ ದೇಹಗಳ ನಡುವೆ ಇರಬೇಕೇ ಹೊರತು ಮನಸ್ಸುಗಳ ನಡುವೆ ಅಲ್ಲ ಎಂಬುದು ಪುಟಾಣಿ ಛೋಟಿ ಚೇತನಾಳ ಕಿವಿಮಾತು.

ಮೈಸೂರಿನ ಖ್ಯಾತ ಉದ್ಯಮಿ ಎಸ್.ಎ.ಶ್ರೀಕಾಂತ್‍ದಾಸ್ ಹಾಗೂ ಶ್ರೀಮತಿ ಪ್ರತಿಭಾ ಶ್ರೀಕಾಂತ್ ಅವರ ಮಂಗಳೂರಿನ ಎಯುಎಂ ಆನಿ ಮೇಷನ್ ಸ್ಟುಡಿಯೋಸ್ ಪ್ರೈ.ಲಿ. ‘ಛೋಟಿ ಚೇತನಾ ಆನಿಮೇಷನ್’ ಕಿರು ಚಿತ್ರದ ಮೂಲಕ ಕೋವಿಡ್-19 ಬಗ್ಗೆ ಭಾರೀ ಜನಜಾಗೃತಿ ಮೂಡಿ ಸುತ್ತಿದೆ. ಮೂರನೇ ಸಂಚಿಕೆಯಲ್ಲಿ ಸಾಮಾಜಿಕ ಅಂತರದ ಮಹತ್ವ ಕುರಿತು ಕಾಡ್ಗಿಚ್ಚಿನ ಆರ್ಭಟ ಹತ್ತಿಕ್ಕುವ ಉಪಾಯದ ಪುಟ್ಟ ಕಥೆ ಹೇಳುವ ಮೂಲಕ ಪುಟಾಣಿ ಛೋಟಿ ಚೇತನಾ ಕೊರೊನಾ ಜಾಗೃತಿ ಕುರಿತು ಪರಿಣಾಮ ಕಾರಿಯಾಗಿ ಮನ ಸೆಳೆಯುವಂತೆ ವಿವರಿಸುತ್ತಾಳೆ. ಒಂದು ಕಾಡಿತ್ತು. ಅಲ್ಲಿ ಮರ-ಗಿಡ-ಬಳ್ಳಿಯ ಜೊತೆಗೆ ಅಲ್ಲಿ ಬುಡಕಟ್ಟು ಜನರ ಜೀವನವೂ ಚೆನ್ನಾಗಿ ನಡೆಯುತ್ತಿತ್ತು. ಇದ್ದಕ್ಕಿದಂತೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಜ್ವಾಲೆ ಆರ್ಭಟಿಸುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆ ವ್ಯಾಪಿ ಸುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ, ಏನೇ ಮಾಡಿದರೂ ಹತೋಟಿಗೆ ತರಲಾಗುತ್ತಿ ರಲಿಲ್ಲ. ಆ ವೇಳೆ ಕೆಲವು ಬುದ್ದಿವಂತರಾ ದವರು ಆ ಅಗ್ನಿ ಆರ್ಭಟದಿಂದ ಅಪಾರ ಕಾಡು ರಕ್ಷಿಸಿಕೊಳ್ಳುವ ಸಲುವಾಗಿ ಮೂರ್ನಾಲ್ಕು ಅಡಿಯಷ್ಟು ಮರ-ಗಿಡಗಳನ್ನು ಕಡಿದು ಅಂತರ ಸೃಷ್ಟಿಸುತ್ತಾರೆ. ಇದರಿಂದ ಬೆಂಕಿ ಮುಂದೆ ವ್ಯಾಪಿಸಲಾಗದೆ, ಅಲ್ಲಿಯೇ ಸ್ಥಗಿತಗೊಳ್ಳುತ್ತದೆ. ಅದರಂತೆ ನಾವುಗಳು ಕೊರೊನಾ ಸೋಂಕಿನಿಂದ ಪಾರಾಗ ಬೇಕಾದರೆ ಪರಸ್ಪರ ಐದು ಅಡಿಯಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂದು ಚೇತನಾ ತನ್ನ ಮುಗ್ಧ; ಮುದ್ದು ಮಾತಿನ ಮೂಲಕ ತಿಳಿ ಹೇಳಿದ್ದಾಳೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಬುದ್ದಿವಂತ ರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂತರ ನಮ್ಮ ದೇಹಗಳ ನಡುವೆ ಇರಲಿ-ಮನಸ್ಸುಗಳ ನಡುವೆ ಬೇಡ ಎಂಬುದು ಛೋಟಿ ಚೇತನಾಳ ಕಾಳಜಿಯಾಗಿದೆ.

ಈ ಸಂಚಿಕೆಯೂ ಜನರ ಮನಸೂರೆಗೊಳ್ಳುತ್ತಿದ್ದು, ತಮ್ಮ ಪ್ರಯತ್ನಕ್ಕೆ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗುತ್ತಿರುವುದಕ್ಕೆ ಶ್ರೀಕಾಂತ್‍ದಾಸ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.