ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮೈಸೂರು: ಮೈಸೂರು-ಹುಣಸೂರು ರಸ್ತೆ, ಇಲವಾಲದ ಬಳಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಸಮೀಪದ ನಿಲಂಗಾಲ ಗ್ರಾಮದ ಮಹದೇವು ಅವರ ಪುತ್ರ ಯಶವಂತಕುಮಾರ್(22) ಮೃತಪಟ್ಟವರು. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಇವರು, ಊರಿಗೆ ಹೋಗಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಸೋಮವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಯಲ್ಲಿ ಯಶವಂತ್ ತಮ್ಮ ಹೊಂೀಡಾ ಶೈನ್ ಬೈಕ್(ಕೆಎ-45, ಎಕ್ಸ್-9420)ನಲ್ಲಿ ಮೈಸೂರಿನ ಕಡೆಗೆ ಬರುವಾಗ ಇಲವಾಲ ಸಮೀಪದ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ, ಡಿವೈಡರ್‍ಗೆ ಟಚ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆಯೇ ವೇಗವಾಗಿ ಬರುತ್ತಿದ್ದ ಲಾರಿ(ಕೆಎ-11, 350) ಯಶವಂತ್ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವ ಇಲವಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ವೇಗವಾಗಿ ಬರುತ್ತಿದ್ದ ಲಾರಿಯ ಒಂದು ಪಾಶ್ರ್ವ, ಯಶವಂತ್‍ನ ಬೈಕ್‍ಗೆ ಟಚ್ ಆಗಿದ್ದರಿಂದ ಆತ ಕೆಳಗೆ ಬಿದ್ದಿದ್ದಾನೆ. ನಂತರ ಲಾರಿಯ ಹಿಂದಿನ ಚಕ್ರ ಆತನ ಮೇಲೆ ಹರಿದು ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ. ಅಪಘಾತ ಹೇಗೆ ಸಂಭವಿಸಿತೆಂದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.