ಆ.3ರಿಂದ ಹಲವು ಹಂತದ ಹೋರಾಟಕ್ಕೆ ರೈತ ಸಂಘಟನೆ ಒಕ್ಕೂಟ ನಿರ್ಧಾರ

ಕೋವಿಡ್, ಲಾಕ್‍ಡೌನ್ ಪರಿಣಾಮ ರೈತರಿಗೆ ಶೇ.75ರಷ್ಟು ಆದಾಯ ನಷ್ಟ: ಕುರುಬೂರು
ಮೈಸೂರು, ಜು.30(ಆರ್‍ಕೆಬಿ)- ಕೋವಿಡ್-19 ಹಿನ್ನೆಲೆಯ ಲಾಕ್ ಡೌನ್‍ನಿಂದಾಗಿ ಹೂವು, ಹಣ್ಣು, ತರಕಾರಿ ಕೃಷಿ ಹಾಗೂ ಕೋಳಿ ಮತ್ತು ಮೀನು ಸಾಕಾಣಿಕೆಯಿಂದ ಬರಬೇಕಿದ್ದ ಆದಾಯದಲ್ಲಿ ರೈತರಿಗೆ ಶೇ.75ರಷ್ಟು ನಷ್ಟವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದೇ ವೇಳೆ ಸರ್ಕಾರ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಹೊಡೆತ ನೀಡಿದೆ. ಇದೆಲ್ಲವನ್ನೂ ವಿರೋ ಧಿಸಿ ಆ.3ರಿಂದ ಹಳ್ಳಿಗಳಲ್ಲಿ ಭಿತ್ತಿಫಲಕ ಹಾಕಿ ಪೋಸ್ಟ್‍ಕಾರ್ಡ್ ಚಳವಳಿ ನಡೆಸಲಾಗುವುದು. ಆ.8ರಂದು ಜಿಲ್ಲಾ ಕೇಂದ್ರಗಳಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗು ವುದು. `ನಮ್ಮೂರ ಭೂಮಿ ನಮಗಿರಲಿ-ಅನ್ಯರಿಗಲ್ಲ’ ಹೋರಾಟ ಸಮಿತಿ ಯೊಂದಿಗೆ ಸೇರಿ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು, ರೈತ ಸಂಘಟನೆಗಳ ಮುಖಂಡರು, ರೈತಪರ ಚಿಂತಕರು, ಪ್ರಗತಿಪರ ಸಂಘಟನೆಗಳ ಮುಖಂಡರಿದ್ದಾರೆ ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕಾರ್ಯದರ್ಶಿ ಗುರುಪ್ರಸಾದ್, ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ್, ರಾಮೇಗೌಡ, ಮಂಜುಕಿರಣ್, ರಘು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.