ಕರ್ನಾಟಕ ಜಾನಪದ ವಿವಿ ಪುನಶ್ಚೇತನಕ್ಕೆ ಜಾನಪದ ಅಭಿವೃದ್ಧಿ ಸಮಿತಿ ಮನವಿ

ಮೈಸೂರು,ಡಿ.8(ಆರ್‍ಕೆಬಿ)-ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ಸೊರಗಿ ನಿಂತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಾನಪದ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಾನಪದ ಅಭಿವೃದ್ಧಿ ಸಮಿತಿ ಸಂಚಾಲಕಿ ಡಾ.ಎಂ.ಕನ್ನಿಕಾ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಾಮಾಜಿಕ, ಆರ್ಥಿಕ, ಆಡಳಿತಾತ್ಮಕವಾಗಿ ಕರ್ನಾಟಕ ಜಾನಪದ ಅಕಾಡೆಮಿ ಕುಸಿದಿದೆ. ಇದರ ಪುನಶ್ಚೇತನಕ್ಕೆ, ಅಭಿವೃದ್ಧಿಗೆ 10 ಪ್ರಮುಖ ಅಂಶಗಳನ್ನು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದರು. ಎಲ್ಲ ಪಿಯುಸಿ ಮತ್ತು ಬಿಎ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ವಿಷಯ ಕಲಿಸಬೇಕು. ಅಂತಹವರಿಗೆ ಕೆಪಿಎಸ್‍ಸಿ ಮೊದಲಾದ ಕಡೆ ಶೇ.40ರಷ್ಟು ಉದ್ಯೋಗ ಮೀಸಲಿ ರಿಸಬೇಕು. 2011ರಿಂದ 20ರವರೆಗೆ ಜಾನಪದ ವಿವಿಗೆ ಬೋಧಕ, ಬೋಧಕೇತರ ಹುದ್ದೆಗಳ ನೇಮಕ ಆಗಿಲ್ಲ. ಆದ್ದರಿಂದ ನೇಮ ಕಾತಿ ಪ್ರಕ್ರಿಯೆ ಕೈಗೊಂಡು ವಯೋಮಿತಿ ಮೀರುತ್ತಿರುವವರಿಗೆ ಆದ್ಯತೆ ನೀಡಬೇಕು. ಜಾನಪದ ವಿವಿಯ ಪ್ರಥಮ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣನವರ ಅವಧಿಯಲ್ಲಿನ ಎಲ್ಲ ನಿಯೋಜನೆ, ಪತ್ರಿಕಾ ಪ್ರಕಟಣೆ, ಸಹ ಕೇಂದ್ರ, ಚಟುವಟಿಕೆಗೆ ಮತ್ತೆ ಚಾಲನೆ ದೊರೆಯಬೇಕು ಎಂಬಿತ್ಯಾದಿ ಅಂಶಗಳ ಸಲಹೆಗಳನ್ನು ಅವರು ಸರ್ಕಾ ರಕ್ಕೆ ನೀಡಿದರು. ಇತ್ತೀಚೆಗೆ ಸಿಂಡಿಕೇಟ್ ಸದಸ್ಯರಾಗಿ ಸ್ನಾತಕೋ ತ್ತರ ಪದವಿ ಪಡೆಯದವರು ಅನ್ಯ ವಲಯದವರು, ಜಾನಪದದ ಬಗ್ಗೆ ಸಾಮಾನ್ಯ ತಿಳುವಳಿಕೆ ಇಲ್ಲದವರು ಇತ್ತೀಚೆಗೆ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಳ್ಳುತ್ತಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ವಿದ್ಯಾರ್ಹತೆ, ಕೌಶಲ್ಯತೆ, ಸಾಮಾಜಿಕ ಕಳಕಳಿ, ವಿದ್ಯಾರ್ಥಿ ಗಳ ಬಾಂಧವ್ಯತೆ ಹೊಂದಿರುವವರನ್ನು ಸದಸ್ಯರಾಗಿ ವಿವಿಗಳಿಗೆ ಸರ್ಕಾರ ನೇಮಕಗೊಳಿಸಬೇಕು ಎಂದು ಸಲಹೆ ನೀಡಿದರು.

ಮುಂದಿನ ಬಜೆಟ್‍ನಲ್ಲಿ ಸರ್ಕಾರ ಸಮಿತಿ ನೀಡಿರುವ 10 ಪ್ರಮುಖ ಅಂಶಗಳನ್ನು ಅನುಮೋದಿಸಬೇಕು ಎಂದು ಒತ್ತಾ ಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಡಾ ಸದಸ್ಯೆ ಲಕ್ಷ್ಮೀದೇವಿ, ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ, ಸಹ ಸಂಚಾಲಕಿ ಡಾ. ಛಾಯಾ, ಸಮಿತಿಯ ಮೈಸೂರು ವಿಭಾಗದ ಅಧ್ಯಕ್ಷ ಪ್ರಕಾಶ್, ಡಾ. ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.