‘ಟಿಪ್ಪು ನಿಜಕನಸುಗಳು’ ಮೂರನೇ ಪ್ರದರ್ಶನಕ್ಕೂ ಉತ್ತಮ ಪ್ರತಿಕ್ರಿಯೆ

ಮೈಸೂರು, ನ.24(ಎಂಕೆ)- ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿತ ‘ಟಿಪ್ಪು ನಿಜಕನಸುಗಳು’ ನಾಟಕದ ಮೂರನೇ ಪ್ರದರ್ಶನ ಪೊಲೀಸ್ ಭದ್ರತೆಯಲ್ಲಿ ನಡೆಯಿತು.

ಕಿಕ್ಕಿರಿದು ತುಂಬಿದ್ದ ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ಮೊದಲ (ನ.20) ಹಾಗೂ ಎರಡನೇ(21) ಪ್ರದರ್ಶನ ದಂತೆಯೇ ಗುರುವಾರ 3ನೇ ಪ್ರದರ್ಶನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಟಿಪ್ಪು ನಿಜಕನಸುಗಳು’ ನಾಟಕ ಕೃತಿ ಮಾರಾಟಕ್ಕೆ ಮಾತ್ರ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆ ಯಾವುದೇ ಗೊಂದಲ ವಿಲ್ಲದೆ ನಾಟಕ ಪ್ರದರ್ಶನಗೊಂಡಿತು. ನಾಟಕ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸಿದ್ದ ನೂರಾರು ಮಂದಿ ರಂಗಭೂಮಿ ಅಭಿಮಾನಿಗಳು ನಾಟಕದ ಪ್ರತಿಯೊಂದು ಸನ್ನಿವೇಶವನ್ನು ಸವಿದರಲ್ಲದೆ ಚಪ್ಪಾಳೆ ತಟ್ಟಿ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.

ನ.29 ಮತ್ತು ಡಿ.1ಕ್ಕೆ ಕಲಾಮಂದಿರದಲ್ಲಿ: ರಂಗಾಸ್ತಕರ ಒತ್ತಾಯದ ಮೇರೆಗೆ ನ.29 ಹಾಗೂ ಡಿ.1 ರಂದು ಕಲಾಮಂದಿರದಲ್ಲಿ ‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಈಗಾಗಲೇ ಮೂರು ಪ್ರದರ್ಶನಗಳು ಯಶಸ್ವಿಯಾಗಿದ್ದು, ಟಿಕೆಟ್ ಸಿಗದೆ ಸಾಕಷ್ಟು ಜನರು ವಾಪಸ್ ಹೋಗುವಂತಾಗಿದೆ. ಆದ್ದರಿಂದ ಒಂದೇ ವೇದಿಕೆಯಲ್ಲಿ ಸಾವಿರಾರು ಜನರು ನೋಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಲಾಮಂದಿರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ರಂಗಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.