ಮೈಸೂರು, ಜು.21(ವೈಡಿಎಸ್)- ಕೋವಿಡ್-19 ಸೋಂಕು ದೃಢಪಟ್ಟಾಗ ಸ್ವಲ್ಪ ಹೆದರಿಕೆಯಾಯಿತು. ಆಸ್ಪತ್ರೆಗೆ ಹೋದಾಗ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದನ್ನು ಕಂಡು ಧೈರ್ಯ ಬಂತು. ಹಾಗಾಗಿ ಯಾರೊಬ್ಬರು ಹೆದರಬೇಕಿಲ್ಲ. ಸಕಾರಾತ್ಮಕ ಯೋಚನೆ ಇದ್ದರೆ ಕೋವಿಡ್ ಗೆಲ್ಲಬಹುದು… ಇದು, ಶ್ರೀರಾಂಪುರ ನಿವಾಸಿ, ಬೆಮೆಲ್ ಉದ್ಯೋಗಿ 56 ವರ್ಷದ ಗುರುರಾಜ್ ಅವರ ಆತ್ಮವಿಶ್ವಾಸದ ನುಡಿಗಳು.
ಕಳೆದ ಜೂನ್ 27ರಂದು ಕೋವಿಡ್ ಆಸ್ಪತ್ರೆ ಸೇರಿದ ಗುರು ರಾಜ್, ಅಲ್ಲಿನ ಉತ್ತಮ ವಾತಾವರಣ, ಗುಣಮಟ್ಟದ ಚಿಕಿತ್ಸೆ, ವೈದ್ಯರ ಧೈರ್ಯದ ನುಡಿಗಳಿಂದ ತಾವು ಗುಣಮುಖರಾಗಿ ಬಂದ ಬಗೆಯನ್ನು, ಡಿಸ್ಚಾರ್ಜ್ ಆಗಿ ಮನೆ ಸೇರಿದಾಗ ನೆರೆಹೊರೆ ಯವರು ತೋರಿದ ಕಾಳಜಿ, ಪ್ರೀತಿ-ವಿಶ್ವಾಸವನ್ನು, ಅದರಿಂದ ತಮಗಾದ ಅನುಭವವನ್ನು `ಮೈಸೂರು ಮಿತ್ರ’ನ ಜತೆ ಭಾನುವಾರ ಹಂಚಿಕೊಂಡಿದ್ದಾರೆ.
`ನಾನು ಯಾವುದೇ ಕಾರ್ಯಕ್ರಮಗಳಿಗೆ ಹೋಗಿಲ್ಲ. ಎಲ್ಲೆಲ್ಲೋ ತಿರುಗಾಡಲೂ ಹೋಗಿರಲಿಲ್ಲ. ಫ್ಯಾಕ್ಟರಿ ಕೆಲಸಕ್ಕೆ ಮಾತ್ರ ಎಂದಿ ನಂತೆ ಹೋಗುತ್ತಿದ್ದೆ. ನಮ್ಮ ಬೆಮೆಲ್ ಕಂಪನಿಯ ಉದ್ಯೋಗಿ ಯೊಬ್ಬರು ಬೆಂಗಳೂರಿಗೆ ಹೋಗಿ ಬಂದಾಗ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ನಾನು ಕೂಡ ಬೆಮೆಲ್ ಉದ್ಯೋಗಿಯಾದ್ದ ರಿಂದ ಸೋಂಕಿನ ಬಗ್ಗೆ ಶಂಕೆ ಮೂಡಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿ ಕೊಂಡೆ. ಆಗ ವರದಿ ಪಾಸಿಟಿವ್ ಬಂದಿತು. ಜೂ.27ರಂದು ವೈದ್ಯರು ಆಂಬ್ಯುಲೆನ್ಸ್ನಲ್ಲಿ ಮನೆಗೆ ಬಂದು ಆಸ್ಪತ್ರೆಗೆ ಕರೆ ದೊಯ್ದರು. ಆರಂಭದಲ್ಲಿ ಭಯವಾಗುತ್ತಿತ್ತು. ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದನ್ನು ಕಂಡು ಧೈರ್ಯ ಬಂತು’. `10 ದಿನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಾಗ ಕೋವಿಡ್ ವಿಶೇಷ ಬಸ್ನಲ್ಲಿ ಮನೆಗೆ ಕರೆದುಕೊಂಡು ಬಂದುಬಿಟ್ಟರು. ಆಗ ಅಕ್ಕ ಪಕ್ಕದ ನಿವಾಸಿಗಳು ನಮ್ಮ ಮನೆಗೆ ಬಂದು ಆರೋಗ್ಯ ವಿಚಾರಿಸಿ ದರು. ನೆರೆಹೊರೆಯವರ ಈ ನಡವಳಿಕೆ, ಅವರು ತೋರಿದ ಕಾಳಜಿ ಕಂಡು ಮನಸ್ಸಿಗೆ ಬಹಳ ಸಂತೋಷವಾಯಿತು. ಬಳಿಕ ವೈದ್ಯರ ಸಲಹೆಯಂತೆಯೇ ಮನೆಯಲ್ಲೇ 14 ದಿನಗಳ ಕ್ವಾರಂಟೈನ್ ನಲ್ಲಿದ್ದೇನೆ. ಈ ಅವಧಿ ಮುಗಿಯಲು ಒಂದೆರಡು ದಿನವಿದೆ. ಸದ್ಯ ಯಾವುದೇ ಸೋಂಕು ಇಲ್ಲದೇ ಆರಾಮವಾಗಿದ್ದೇನೆ’ ಎಂದರು.