ಜಿಟಿಡಿ ಹೊರಗಿಟ್ಟು ಮೈಸೂರು ವಿಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾದ ಹೆಚ್‍ಡಿಕೆ

ಏಳು ವಿಭಾಗಗಳಿಗೆ ವೀಕ್ಷಕರ ನೇಮಕ
ಮೈಸೂರು, ಜ.19-ಹಿರಿಯ ಶಾಸಕ ಜಿ.ಟಿ.ದೇವೇಗೌಡರನ್ನು ಹೊರಗಿಟ್ಟು ಮೈಸೂರು ವಿಭಾಗದಲ್ಲಿ ಜೆಡಿಎಸ್ ಸಂಘಟನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ನಡೆದ ಪ್ರಮುಖ ಮುಖಂಡರ ಸಭೆಯ ನಿರ್ಧಾರದಂತೆ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ಸಂಘಟನೆಯ ಉದ್ದೇಶದಿಂದ ರಾಜ್ಯದ 7 ವಿಭಾಗಗಳಿಗೆ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಮೈಸೂರು ವಿಭಾಗಕ್ಕೆ ಜಿಟಿಡಿ ಅವರನ್ನು ಹೊರಗಿಟ್ಟು ಶಾಸಕರಾದ ಎಚ್.ಡಿ.ರೇವಣ್ಣ, ಸಾ.ರಾ. ಮಹೇಶ್, ಸಿ.ಎಸ್.ಪುಟ್ಟರಾಜು, ಎಂ.ಅಶ್ವಿನ್‍ಕುಮಾರ್, ಡಾ.ಕೆ.ಅನ್ನದಾನಿ, ಮಾಜಿ ಶಾಸಕ ಚಿಕ್ಕಣ್ಣ, ಮುಖಂಡರಾದ ನಿಖಿಲ್ ಕುಮಾರಸ್ವಾಮಿ, ಮೊಹಮ್ಮದ್ ಜಫ್ರುಲ್ಲಾಖಾನ್, ಅಬ್ದುಲ್ ಅಜೀಜ್ ಅಬ್ದುಲ್ಲಾ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.