ಎನ್‍ಆರ್ ಕ್ಷೇತ್ರದಲ್ಲಿ ಸಂಜೆ ದಿಢೀರ್ ವಾಹನ ದಟ್ಟಣೆ!

ಮೈಸೂರು, ಏ.24(ಎಂಕೆ)- ವಾರಾಂತ್ಯ ಲಾಕ್‍ಡೌನ್ ನಡುವೆಯೂ ಮೈಸೂರು ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೂ ಖಾಲಿಯಾಗಿದ್ದ ಎನ್.ಆರ್.ಕ್ಷೇತ್ರ ವ್ಯಾಪ್ತಿಯ ಉದಯಗಿರಿ, ರಾಜೀವ್‍ನಗರ, ಕಲ್ಯಾಣಗಿರಿಯ ಪ್ರಮುಖ ರಸ್ತೆಗಳಲ್ಲಿ ಸಂಜೆಯಾಗು ತ್ತಿದ್ದಂತೆ ದಿಢೀರನೆ ವಾಹನಗಳ ದಟ್ಟಣೆ ಹೆಚ್ಚಿತು. ಮಹದೇವಪುರ ಮುಖ್ಯರಸ್ತೆ (ಅಜೀಜ್ ಸೇಠ್ ಮುಖ್ಯರಸ್ತೆ), ರಾಜಕುಮಾರ್ ರಸ್ತೆ ಮತ್ತಿತರೆ ಪ್ರಮುಖ ರಸ್ತೆಗಳಲ್ಲಿ ಸಂಜೆ 4 ಗಂಟೆ ಬಳಿಕ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಯಿತು. ತಕ್ಷಣ ಎಚ್ಚೆತ್ತ ಉದಯಗಿರಿ ಠಾಣೆ ಪೊಲೀಸರು ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿದರು. ವಾಹನ ಸವಾರರನ್ನು ತಡೆದು ವಾಪಸ್ ಕಳುಹಿಸಿದರು. ಅಹಿತಕರ ಘಟನೆಗೆ ಆಸ್ಪದವಾಗದಂತೆ ಉದಯ ಗಿರಿಯ ಮಹದೇವಪುರ ಮುಖ್ಯರಸ್ತೆಯಲ್ಲಿನ ಹಿಲ್‍ಟಾಪ್ ಬಾರ್ ಬಳಿ ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿತ್ತು. ಅಗತ್ಯ ಸೇವಾ ವಿಭಾಗಕ್ಕೆ ಸಂಬಂಧಿಸಿದವರಷ್ಟೇ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು.