ನೇಣು ಬಿಗಿದುಕೊಂಡು ಗೃಹಿಣ ಸಾವು

ಮೈಸೂರು: ನೇಣು ಬಿಗಿದುಕೊಂಡು ಗೃಹಿಣ ಯೊಬ್ಬರು ಸಾವನ್ನಪ್ಪಿದ್ದು, ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿರುವ ಘಟನೆ ಮೈಸೂರು ತಾಲೂಕು, ಬ್ಯಾತನಹಳ್ಳಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಗ್ರಾಮದ ಮಹೇಶ ಎಂಬುವರ ಪತ್ನಿ ಶ್ರೀಮತಿ ಕಾವ್ಯಾ ಸಾವನ್ನಪ್ಪಿದವರು. ಮೂಲತಃ ಮೈಸೂರು ತಾಲೂಕು, ಶೆಟ್ಟಿನಾಯಕನಹಳ್ಳಿಯವರಾದ ಕಾವ್ಯಾಳನ್ನು ಮೂರು ವರ್ಷಗಳ ಹಿಂದೆ ಬ್ಯಾತಹಳ್ಳಿಯ ಮಹೇಶ್‍ಗೆ ಕೊಟ್ಟು ಮದುವೆ ಮಾಡಲಾಗಿತ್ತು. ತವರಲ್ಲಿ ಬಾಣಂತನ ಮುಗಿಸಿಕೊಂಡು ಮೂರು ದಿನಗಳ ಹಿಂದಷ್ಟೇ ಗಂಡನ ಮನೆಗೆ ಹಿಂದಿರುಗಿದ್ದ ಕಾವ್ಯಾ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಬ್ಯಾತಹಳ್ಳಿಗೆ ಆಗಮಿಸಿದ ಆಕೆಯ ಪೋಷಕರು, ಗಂಡ ಮಹೇಶ ಹಾಗೂ ಮನೆಯವರೇ ಹತ್ಯೆಗೈದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಕಡಕೊಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.