ಹಿರಿಯ ಅಧಿಕಾರಿಯಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಪ್ರಕರಣದ ತನಿಖೆ

ಮೈಸೂರು, ಜೂ.4(ಎಂಟಿವೈ)- ಲಾಕ್‍ಡೌನ್ ವೇಳೆ ಎಲ್ಲರಿಗೂ ಪಡಿತರ ವಿತರಿಸಲೆಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರ ಪೂರೈಸಿದ್ದ ಪಡಿತರ ಅಕ್ಕಿಯನ್ನು ಗೋದಾಮಿ ನಿಂದಲೇ ಅಕ್ರಮವಾಗಿ ಸಾಗಿಸಿ ಕಾಳ ಸಂತೆಯಲ್ಲಿ ಮಾರುತ್ತಿದ್ದ ದಂಧೆಕೋರರ ವಿರುದ್ಧ ತನಿಖೆ ನಡೆಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ನಿಯೋ ಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡ್ ಇದ್ದ ವರು ಹಾಗೂ ಯಾವುದೇ ಕಾರ್ಡ್ ಇಲ್ಲದವರಿಗೂ ವಿತರಿಸಬೇಕಾದ ಅಕ್ಕಿ, ಬೇಳೆ ಮತ್ತಿತರ ಸಾಮಗ್ರಿ ಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರುವ ಬಹು ದೊಡ್ಡ ಜಾಲವಿದೆ. ಈ ದಂಧೆಯಲ್ಲಿ ಪ್ರಭಾವಿಗಳು, ಅಧಿಕಾರಿ ವರ್ಗ ಶಾಮೀಲಾಗಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಗೋಪಾಲಯ್ಯ ಅವರಿಗೆ ಪತ್ರ ಬರೆದಿದ್ದೆ. ಅವರು ತನಿಖೆಗೆ ಹಿರಿಯ ಅಧಿಕಾರಿಯನ್ನು ನೇಮಿಸಿದ್ದಾರೆ ಎಂದು ರಾಮದಾಸ್ ವಿವರಿಸಿದರು. ಅಕ್ರಮವೆಸ ಗುವ ಉದ್ದೇಶದಿಂದಲೇ ಮೈಸೂರು ಜಿಲ್ಲೆಯ ಎಲ್ಲಾ ಗೋಡೌನ್‍ಗಳಲ್ಲಿ ಸಿಸಿ ಕ್ಯಾಮರಾವನ್ನೇ ಅಳವಡಿ ಸಿಲ್ಲ. ಹಿಂದೆ ಇದ್ದ ಕ್ಯಾಮರಾಗಳನ್ನು ಕಿತ್ತು ಹಾಕಿದ್ದಾರೆ. ಉಗ್ರಾಣಕ್ಕೆ ಬಂದು ಹೋಗುವ ವಾಹನಗಳ ಸಂಖ್ಯೆಯನ್ನೂ ದಾಖಲಿಸುತ್ತಿಲ್ಲ. ಗೋಡೌನ್‍ಗೆ ಬಂದ ಪಡಿತರ ವಸ್ತುಗಳ ಪ್ರಮಾಣವನ್ನೂ ದಾಖ ಲಿಸುತ್ತಿಲ್ಲ. 3 ಗೋದಾಮುಗಳಿಂದಲೂ ಪ್ರತಿ ತಿಂಗಳು ಸಾವಿರಾರು ಮೂಟೆ ಪಡಿತರ ಅಕ್ಕಿಯನ್ನು ಮಂಡ್ಯದ ರೈಸ್‍ಮಿಲ್‍ಗೆ ಸಾಗಿಸಿ, ಅಲ್ಲಿ ಪಾಲಿಶ್ ಮಾಡಿಸಿದ ನಂತರ ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂದು ಶಾಸಕರು ದೂರಿದರು. ಉಗ್ರಾಣ ನಿರ್ವಹಣೆ ಜತೆಗೇ ವಿವಿಧೆಡೆ ಯಿರುವ ರೇಷನ್ ಡಿಪೋಗಳಿಗೆ ಪಡಿತರ ವಸ್ತುಗಳನ್ನು ಸಾಗಿಸಲು ಪ್ರತ್ಯೇಕವಾಗಿ ಟೆಂಡರ್ ಪಡೆಯಲಾಗಿದೆ. ನೋಂದಣಿ ಮಾಡಿಕೊಂಡ ಲಾರಿಗಳಿಂದಲೇ ಪಡಿತರ ವಸ್ತು ಸಾಗಣೆಗೆ ಅವ ಕಾಶ ನೀಡಲಾಗಿದೆ. ಆದರೆ ಬಂಬೂಬಜಾರ್ ಬಳಿಯ ಉಗ್ರಾಣದಿಂದ ಅನಧಿಕೃತ (ಕೆಎ-41-4941) ಲಾರಿ ಯಲ್ಲಿ 350 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮ ವಾಗಿ ಸಾಗಿಸಲಾಗಿದೆ. ಈ ಅಕ್ಕಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 311ಕ್ಕೆ ಸೇರಿದ್ದಾಗಿದೆ. ಈ ಬಗ್ಗೆ ಇಂಡೆಂಟ್ ಬಿಲ್ ನೀಡುವಂತೆ ಉಗ್ರಾಣ ಪಾಲಕರನ್ನು ಕೇಳಿ ದರೆ ಅವರು, `ಬಿಲ್ ಪ್ರತಿ ತಮ್ಮ ಬಳಿ ಇಲ್ಲ’ ಎಂದರು. ಅನು ಮಾನಗೊಂಡು ಈ ಎಲ್ಲಾ ಅಂಶವನ್ನು ಸಚಿವರಿಗೆ ಪತ್ರದ ಮುಖೇನ ಗಮನಕ್ಕೆ ತರಲಾ ಗಿತ್ತು. ಸಚಿವರು ಇಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಇದು ಒಳ್ಳೆ ಬೆಳವಣಿಗೆ. ಇದರಿಂದ ಬಡ ಕುಟುಂಬಗಳಿಗೆ ಪಡಿತರ ವಸ್ತುಗಳು ಸರಿಯಾಗಿ ತಲುಪಲು ಕ್ರಮ ಕೈಗೊಂಡಂತಾಗಿದೆ ಎಂದರು.