ಮಂದಲಪಟ್ಟಿಯಲ್ಲಿ ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್ ಖಾಸಗಿ ಸಂಸ್ಥೆ ವಿರುದ್ಧ ಕ್ರಮಕ್ಕೆ ಕೊಡಗು ರಕ್ಷಣಾ ವೇದಿಕೆ ಆಗ್ರಹ

ಮಡಿಕೇರಿ, ಆ.೨೬- ಅಭಯಾರಣ್ಯವಾಗಿ ರುವ ಮಂದಲಪಟ್ಟಿಯಲ್ಲಿ ಜಾಲಿ ರೈಡ್ ಹೆಸರಿನಲ್ಲಿ ಕಾನೂನುಬಾಹಿರವಾಗಿ ಹೆಲಿ ಕಾಪ್ಟರ್ ಹಾರಾಟವಾಗುತ್ತಿದ್ದು, ಇದರಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ದುಷ್ಪರಿ ಣಾಮ ಬೀರಲಿದೆ ಎಂದು ಕೊಡಗು ರಕ್ಷಣಾ ವೇದಿಕೆ(ಕೊರವೇ) ಆರೋಪಿಸಿದೆ. ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿರುವ ಸಂಘಟನೆಯ ಪ್ರಮುಖರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನಗರದ ಅರಣ್ಯ ಭವನಕ್ಕೆ ತೆರಳಿದ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ನೇತೃ ತ್ವದ ನಿಯೋಗ ಅಧಿಕಾರಿಗಳಿಗೆ ದೂರು ನೀಡಿ ಹೆಲಿಕಾಪ್ಟರ್ ಹಾರಾಟದಿಂದ ಆಗಬಹು ದಾದ ಅನಾಹುತಗಳ ಬಗ್ಗೆ ವಿವರಿಸಿದರು.

ಮಂದಲಪಟ್ಟಿಯಲ್ಲಿ ಪ್ರಕೃತಿ ವರವಾಗಿ ನೀಡಿದ ನೀಲಕುರುಂಜಿ ಪುಷ್ಪರಾಶಿಯನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಖಾಸಗಿ ಸಂಸ್ಥೆಯೊAದು ಜಾಲಿರೈಡ್ ಹೆಸರಿ ನಲ್ಲಿ ಲಕ್ಷಾಂತರ ರೂ.ಗಳನ್ನು ಸಂಗ್ರಹಿಸಿ ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಕರೆತಂದು ಹಾರಾಟ ನಡೆಸುತ್ತಿದೆ. ಅಭಯಾ ರಣ್ಯ ವ್ಯಾಪ್ತಿಗೆ ಒಳಪಡುವ ಮಂದಲಪಟ್ಟಿ ಯಲ್ಲಿ ಪೂರ್ವಾನುಮತಿ ಇಲ್ಲದೆ ಹೆಲಿ ಕಾಪ್ಟರ್ ಹಾರಾಡುವುದು ಕಾನೂನುಬಾಹಿರ ವಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಈ ಸಂಸ್ಥೆ ಜಾಹೀರಾತನ್ನು ನೀಡಿ ಮಂದಲಪಟ್ಟಿಯಲ್ಲಿ ಅರಳಿರುವ ನೀಲಕುರಂಜಿ ಹೂವಿನ ಆಕಾಶ ದರ್ಶನ ಮಾಡಿಸುತ್ತೇವೆ ಎಂದು ಪ್ರಚಾರ ನೀಡಿದೆ. ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದ ಪವನ್ ಪೆಮ್ಮಯ್ಯ, ಪ್ರವಾಸಿ ಗರು ಭೂ ಮಾರ್ಗದ ಮೂಲಕ ಬರಲು ನಮ್ಮ ಆಕ್ಷೇಪವಿಲ್ಲ, ಆದರೆ ಆಕಾಶ ಮಾರ್ಗ ದಲ್ಲಿ ಅಭಯಾರಣ್ಯದಲ್ಲಿ ಸಂಚರಿಸುವು ದಕ್ಕೆ ವಿರೋಧವಿದೆ ಎಂದರು.

ಕೆಲವು ವರ್ಷಗಳ ಹಿಂದೆ ಪಶ್ಚಿಮಘಟ್ಟ ಮೂಲನಿವಾಸಿಗಳ ಸಂಘಟನೆಯೊAದು ಮಂದಲಪಟ್ಟಿಯಲ್ಲಿ ವಾರ್ಷಿಕ ಕ್ರೀಡಾಕೂಟ ವನ್ನು ನಡೆಸಿ ಗ್ರಾಮೀಣ ಭಾಗದ ಜನರಲ್ಲಿ ಕ್ರೀಡೋತ್ಸಾಹವನ್ನು ತುಂಬುತ್ತಿತ್ತು. ನಂತರದ ವರ್ಷಗಳಲ್ಲಿ ಅಭಯಾರಣ್ಯ ಎನ್ನುವ ಕಾರಣ ಕ್ಕಾಗಿ ಈ ಕ್ರೀಡಾಕೂಟಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿತು. ಆದರೆ ಇಂದು ಇದೇ ಅರಣ್ಯ ಇಲಾಖೆ ಮಂದಲಪಟ್ಟಿಯನ್ನು ಪ್ರವಾಸಿ ತಾಣವನ್ನಾಗಿ ಪ್ರತಿಬಿಂಬಿಸಿ ಸಾವಿ ರಾರು ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದೆ. ಅಲ್ಲದೆ ಕಾಮಗಾರಿಗಳನ್ನು ಕೂಡ ನಡೆಸಿದೆ. ಇದೀಗ ಹೆಲಿಕಾಪ್ಟರ್ ಹಾರಾಟ ಆರಂಭಗೊAಡಿದ್ದು, ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂದಲಪಟ್ಟಿಗೆ ಕೊರವೇ ನಿಯೋಗ ಭೇಟಿ ನೀಡಿದ ಸಂದರ್ಭ ಅರಣ್ಯ ಸಿಬ್ಬಂದಿ “ನಿಮ್ಮ ಬಳಿ ಡ್ರೋಣ್ ಇದೆಯೇ” ಎಂದು ನಮ್ಮನ್ನು ಪರಿಶೀಲಿಸಿದ್ದಾರೆ. ಇಷ್ಟು ಕಾಳಜಿ ತೋರುವ ಅರಣ್ಯ ಇಲಾಖೆ ಈಗ ಹೆಲಿಕಾಪ್ಟರ್ ಹಾರಾಟಕ್ಕೆ ಹೇಗೆ ಅವಕಾಶ ನೀಡಿತು ಎಂದು ಪ್ರಶ್ನಿಸಿದರು.

ತಕ್ಷಣ ಹೆಲಿಕಾಪ್ಟರ್ ಹಾರಾಟವನ್ನು ಸ್ಥಗಿತಗೊಳಿಸಬೇಕು ಮತ್ತು ನಿಯಮ ಉಲ್ಲಂ ಘಿಸಿದ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮತ್ತೆ ಹೆಲಿಕಾಪ್ಟರ್ ಹಾರಾಟ ಕಂಡು ಬಂದರೆ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗು ತ್ತದೆ ಎಂದು ಪವನ್ ಪೆಮ್ಮಯ್ಯ ಎಚ್ಚರಿಕೆ ನೀಡಿದರು. ಕೊರವೇ ನಿರ್ದೇಶಕ ಪಾಪುರವಿ, ಮಡಿಕೇರಿ ನಗರ ಘಟಕದ ಸಂಚಾಲಕರಾದ ಆರ್.ವಿನೋದ್, ರಾಜುಕೀರ್ತಿ ಮತ್ತಿತ ರರು ಈ ಸಂದರ್ಭ ಹಾಜರಿದ್ದರು.