ಜುಬಿಲಂಟ್ ಕಾರ್ಖಾನೆ ಕೊರೊನಾ ಪ್ರಕರಣ; ತನಿಖಾ ವರದಿ ಬಹಿರಂಗಪಡಿಸಲು ಸಿಪಿಐ(ಎಂ) ಆಗ್ರಹ

ಮೈಸೂರು, ಮೇ 11(ಪಿಎಂ)- ನಂಜನಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹರಡಿದ ಮೂಲದ ಕುರಿತು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಸಿಪಿಐ(ಎಂ) ಮೈಸೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣ ಹೆಚ್ಚು ದಾಖ ಲಾಗಲು ಮುಖ್ಯ ಕಾರಣ ಜುಬಿಲಂಟ್ ಕಾರ್ಖಾನೆ. ಒಟ್ಟು 90 ಪ್ರಕರಣಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ಈ ಕಾರ್ಖಾನೆಗೆ ಸಂಬಂಧಿಸಿದ್ದೇ ಆಗಿವೆ. ಕಾರ್ಖಾನೆಗೆ ಅಂಟಿದ ವೈರಾಣು ಮೂಲದ ಸಂಬಂಧ ತನಿಖೆ ಕೈಗೊಂಡು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರು ಸಲ್ಲಿಸಿರುವ ವರದಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.

ಕೊರೊನಾ ಹರಡುವಿಕೆಯ ಮೂಲ ತಿಳಿದುಕೊಳ್ಳುವುದು ಮೈಸೂರು ಜನತೆಯ ಹಕ್ಕಾಗಿದೆ. ಹರ್ಷಗುಪ್ತ ಅವರಿಗೆ ರಾಜ್ಯ ಸರ್ಕಾರ ಸರಿಯಾದ ಸಹಕಾರ ನೀಡಲಿಲ್ಲ. ಆಡಳಿತ ಪಕ್ಷದ ಜನಪ್ರತಿನಿಧಿಗಳು ತನಿಖೆಗೆ ಆಗ್ರಹಿಸದೇ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕಾರ್ಖಾನೆಯ ಮಾಲೀಕರು ತನಿಖೆ ಆಗದಂತೆ ತಡೆಯನ್ನುಂಟು ಮಾಡು ತ್ತಿದ್ದಾರೆ ಎಂದು ಸಿಪಿಐ(ಎಂ) (ಭಾರತ ಕಮ್ಯೂನಿಸ್ಟ್ ಪಕ್ಷ-ಮಾಕ್ರ್ಸ್‍ವಾದಿ) ಆರೋಪಿಸಿದೆ.