ಕಕ್ಕಟ್ಟುಕಾಡು ರಸ್ತೆ ವಿವಾದ: ತಹಶೀಲ್ದಾರ್ ಗೋವಿಂದರಾಜ್ ಪರಿಶೀಲನೆ

ಸಿದ್ದಾಪುರ: ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿವಾದ ಸ್ಥಳಕ್ಕೆ ವಿರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆ ಸಮಸ್ಯೆಯ ಬಗ್ಗೆ ತಹಶೀಲ್ದಾರ್‍ರವರ ಗಮನ ಸೆಳೆದರು. ಹಲವಾರು ವರ್ಷಗಳಿಂದ ವಾಹನ ಸಂಚಾರದ ರಸ್ತೆಗಾಗಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದು, ರಸ್ತೆ ಇಲ್ಲದೆ ಹಲವು ಜೀವಗಳು ಬಲಿಯಾಗಿದೆ. ಕೂಡಲೇ ಗ್ರಾಮಕ್ಕೆ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಅಲ್ಲದೇ ಕೂಡಲೇ ರಸ್ತೆ ಅಗಲೀಕರಣ ಆಗದಿದ್ದಲ್ಲಿ ಸಿದ್ದಾಪುರದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು. ತಹಶೀಲ್ದಾರ್ ಗೋವಿಂದರಾಜ್ ಮಾತನಾಡಿ ಜಿಲ್ಲಾಡಳಿದಿಂದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವು ದಾಗಿ ತಿಳಿಸಿದರು. ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ಗ್ರಾಮಸ್ಥರಾದ ಪಿ.ಕೆ. ಚಂದ್ರನ್, ಕೆ.ಜಿ.ಚಂದ್ರನ್ ನಿಯಾಜ್, ಎನ್.ಮಣಿ, ವಿಜಯನ್, ನಿತಿನ್ ಇನ್ನಿತರರು ಹಾಜರಿದ್ದರು.