ಕರ್ನಾಟಕದ ಕಾರ್ಮಿಕರನ್ನು ಹೊರ ಹಾಕಿದ ಕೇರಳ

  • ಪೆರುಂಬಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕಾರ್ಮಿಕರಿಗೆ ಸೌಲಭ್ಯ

ವಿರಾಜಪೇಟೆ, ಏ.8- ದೇಶದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ನಿಂದಾಗಿ ಕೇರಳದಲ್ಲಿ ಹೊರರಾಜ್ಯಗಳ ಕೂಲಿ ಕಾರ್ಮಿರನ್ನು ಕೇರಳ ಗಡಿಯಿಂದ ಹೊರಹಾಕಿದ್ದಾರೆ. ಗಡಿ ಪ್ರದೇಶದಿಂದ ಕಾಲ್ನಾಡಿಗೆಯಲ್ಲೇ ವಿರಾಜಪೇಟೆಗೆ ಬಂದ 57 ಕಾರ್ಮಿಕರಿಗೆ ತಾಲೂಕು ಆಡಳಿತ ವಿರಾಜಪೇಟೆ ಬಳಿಯ ಪೆರುಂಬಾಡಿ ಯಲ್ಲಿರುವ ಮುರಾರ್ಜಿ ವಸತಿ ಶಾಲಾ ಆವರಣದಲ್ಲಿ ತಂಗಲು ವ್ಯವಸ್ಥೆಯನ್ನು ಕಲ್ಪಿಸಿದ್ದು, ಜಿಲ್ಲಾ ಆಡಳಿತದಿಂದ ಕಾರ್ಮಿಕರಿಗೆ ಆಹಾರ ಮತ್ತು ಸೌಲಭ್ಯ ಗಳನ್ನು ಒದಗಿಸಲಾಗುತ್ತಿದೆ.

ವಿರಾಜಪೇಟೆ ಹಿರಿಯ ಸಿವಿಲ್ ನ್ಯಾಯಾ ಧೀಶ ಡಿ.ಆರ್.ಜಯಪ್ರಕಾಶ್ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್. ಕೋನಪ್ಪ ಅವರು ಅಧಿಕಾರಿಗಳೊಂದಿಗೆ ಮುರಾರ್ಜಿ ವಸತಿ ಶಾಲೆಗೆ ಭೇಟಿನೀಡಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ ಬಳಿಕ ಸಮಾಜಿಕ ಅಂತರ ಪಾಲಿಸಬೇಕು, ಕಡ್ಡಾಯವಾಗಿ ಸ್ವಚ್ಚತೆಯನ್ನು ಕಾಪಾಡಿ ಕೊಳ್ಳಿ, ಮಾಸ್ಕ್ ಧರಿಸಿರಬೇಕು, ಅನಾವಶ್ಯಕ ವಾಗಿ ಯಾರು ಹೊರಗೆ ಹೋಗಬಾರದು ಎಂದ ನ್ಯಾಯಾಧೀಶರು ಕಾರ್ಮಿಕರಿಗೆ ಧೈರ್ಯ ತುಂಬಿದರು. ಈ ಸಂದರ್ಭ ನಗರ ಠಾಣಾಧಿಕಾರಿ ಮರಿಸ್ವಾಮಿ, ವಸತಿ ಶಾಲೆಯ ಪ್ರಾಂಶುಪಾಲೆ ಮಮತ ಹಾಗೂ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಮಾತನಾಡಿ, ಇಲ್ಲಿರುವ ಕಾರ್ಮಿಕರಲ್ಲಿ ಬಿಜಾಪುರ ಜಿಲ್ಲೆಯ-16 ಮಂದಿ, ಹಾವೇರಿ ಜಿಲ್ಲೆಯ-27 ಮಂದಿ, ಶಿವಮೊಗ್ಗ-5, ಹುಬ್ಬಳ್ಳಿ-6, ಹುಣಸೂರು-1, ಚಿತ್ರದುರ್ಗ-1, ಕೆ.ಆರ್.ನಗರ-1 ಸೇರಿ ಒಟ್ಟು 57 ಮಂದಿ ಕಾರ್ಮಿಕರುಗಳು ಇದ್ದಾರೆ ಎಂದು ತಿಳಿಸಿದರು. ಕಂದಾಯ ಪರಿವೀಕ್ಷಕ ಪಳಂಗಪ್ಪ ಮಾತನಾಡಿ, ಒಟ್ಟು 57 ಮಂದಿ ಹೊರ ಜಿಲ್ಲೆಯ ಕಾರ್ಮಿಕರುಗಳಿದ್ದು, ಅವರಿಗೆ ದಿನ ನಿತ್ಯದ ಆಹಾರ ಮತ್ತು ಸೌಲಭ್ಯ ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.