ಪೌರಕಾರ್ಮಿಕರ ಪ್ರತಿಭಟನೆಗೆ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ಬೆಂಬಲ

ಮೈಸೂರು,ಡಿ.16-ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸ್ವಚ್ಛತೆ ಸಹಾಯ ಕರು ಹಾಗೂ ಪೌರಕಾರ್ಮಿಕರ ಸಂಘ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪಾಲಿಕೆ ಮುಂಭಾಗ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಆದರೆ ಇದಕ್ಕೆ ಸ್ಪಂದಿಸದೇ ನಗರ ಪಾಲಿಕೆ ಮೌನವಾಗಿರುವುದನ್ನು ಖಂಡಿಸಿರುವ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ ಪೌರಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ದೇಶದಲ್ಲಿ ಸ್ವಚ್ಛ ನಗರಿ ಖ್ಯಾತಿಗೆ ಪಾತ್ರವಾಗಿರುವ ಮೈಸೂರಿಗೆ ಆ ಸ್ವಚ್ಛತೆಯನ್ನು ನಿರ್ವಹಿಸುವ ಒಳಚರಂಡಿ ಹಾಗೂ ಪೌರಕಾರ್ಮಿಕರ ಬಗ್ಗೆ ಪಾಲಿಕೆ ಆಡಳಿತ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಖಂಡನೀಯ. ಅವರ ಪ್ರಮುಖ ಬೇಡಿಕೆಗಳಾದ ಬೆಳಗಿನ ಉಪಾಹಾರ ಭತ್ಯೆ ಹಾಗೂ ಕೆಲಸ ಖಾಯಂಗೊಳಿಸಬೇಕೆಂಬ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಮೂಲಕ ಕೆಳಸ್ತರದ ಪೌರಕಾರ್ಮಿಕರ ಸಮಸ್ಯೆಗಳಿಗೆ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಪರಿಹಾರ ಒದಗಿಸಬೇಕು. ನಿರ್ಲಕ್ಷ್ಯ ಧೋರಣೆ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ತಿಳಿಸಿದರು.

ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಪಾಲಿಕೆಯ ಒಳಚರಂಡಿ ಸ್ವಚ್ಛತೆ ಕಾರ್ಮಿಕರಾದ 231 ಜನರ ಬೇಡಿಕೆ ಈಡೇರಿಸಿ ಸ್ವಚ್ಛ ನಗರಿ ಹೆಸರನ್ನು ಚಿರಸ್ಥಾಯಿಗೊಳಿಸುವಂತೆ ಕನ್ನಡ ಹೋರಾಟಗಾರ ಡೈರಿ ವೆಂಕಟೇಶ್ ಒತ್ತಾಯಿಸಿದ್ದಾರೆ.