500 ಜನರಿಗೊಬ್ಬರಂತೆ ಓರ್ವ ಪೌರಕಾರ್ಮಿಕ ಇರಲಿ

ಮೈಸೂರು, ಮೇ 7(ಆರ್‍ಕೆ)-ಪ್ರತೀ 500 ಜನರಿಗೊಬ್ಬರಂತೆ ಮೈಸೂರು ನಗರಪಾಲಿಕೆಗೆ ಪೌರಕಾರ್ಮಿಕರನ್ನು ನೇಮಿಸುವಂತೆ ಮೈಸೂರು ನಗರ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಮಾರ ಆಗ್ರಹಿಸಿದ್ದಾರೆ. ಮೈಸೂರು ನಗರಪಾಲಿಕೆ ಕಚೇರಿಯಲ್ಲಿ ಸಭೆ ನಡೆಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ಮೈಸೂರಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಪ್ರತೀ 700 ಮಂದಿ ಗೊಬ್ಬರಂತೆ ಪ್ರಸ್ತುತ ಪೌರಕಾರ್ಮಿಕರಿರುವುದರಿಂದ ಸ್ವಚ್ಛತಾ ಕೆಲಸ ಕುಂಠಿತವಾಗುತ್ತಿದೆ ಎಂದು ವಿವರಿಸಿದರು.

ಮೈಸೂರಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ಸಂಗ್ರಹ, ವಿಲೇವಾರಿ ಹಾಗೂ ಸ್ವಚ್ಛತಾ ಕಾರ್ಯ ನಿರ್ವಹಿಸಲು ನಿಯಮಿತ ಪೌರಕಾರ್ಮಿಕರಿಂದ ಸಾಧ್ಯವಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿರು ವಂತೆ ನಮ್ಮಲ್ಲಿಯೂ ಪ್ರತೀ 500 ಜನಸಂಖ್ಯೆಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನೇಮಿಸುವಂತೆ ಮಾರ ಅವರು ಸಚಿವರನ್ನು ಒತ್ತಾಯಿಸಿದರು. ಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮುಂತಾದ ಮೂಲ ಸೌಕರ್ಯ ಒದಗಿಸಿ ಸುರಕ್ಷತೆಗೆ ಅನುಕೂಲ ಮಾಡಿಕೊಡಬೇಕು. ಸ್ವಚ್ಛತಾ ಸಲಕರಣೆಗಳನ್ನು ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದರು. ಮನವಿ ಯನ್ನು ಪರಿಗಣಿಸಿ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವ ಬಸವರಾಜು ಇದೇ ವೇಳೆ ಭರವಸೆ ನೀಡಿದರು.