ಅ.15ರಂದು ಮಹಿಷಾ ದಸರಾ

ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧಾರ
ಮೈಸೂರು, ಸೆ.14(ಪಿಎಂ)- ಪ್ರತಿ ವರ್ಷದಂತೆ ಈ ಬಾರಿಯೂ ಮಹಿಷಾ ದಸರಾ ಆಚರಿಸಲು ನಿರ್ಧರಿಸಿದ್ದು, ಕೊರೊನಾ ಹಿನ್ನೆಲೆ ಯಲ್ಲಿ ಸರಳವಾಗಿ ಆಚರಣೆ ಮಾಡಲಿದ್ದೇವೆ. ಇದಕ್ಕೆ ಸರ್ಕಾರ ತಡೆಯೊಡ್ಡದೇ ಅವಕಾಶ ಕಲ್ಪಿಸಬೇಕು ಎಂದು ಮಹಿಷಾ ದಸರಾ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಆವರಣ ದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅ.15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಆಚರಿಸಲಾಗುವುದು. ಈ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆ ಕೂಡ ಮಾಡಲಾಗಿದೆ. ಕೊರೊನಾ ಕಾರಣಕ್ಕೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಮೈಸೂರು ನಗರ ಪೊಲೀಸರು ಅನುಮತಿ ನೀಡಬೇಕು. ಒಂದು ವೇಳೆ ಅನುಮತಿ ಕೊಡದೇ ಇದ್ದರೂ ಮಹಿಷಾ ದಸರಾ ಆಚರಿಸುತ್ತೇವೆ. ನಾವು ಯಾವುದೇ ಧರ್ಮದ ವಿರುದ್ಧವಾಗಿ ಮಹಿಷಾ ದಸರಾ ಆಚರಣೆ ಮಾಡುತ್ತಿಲ್ಲ ಎಂದು ತಿಳಿಸಿದರು.