ಮಾನಸಗಂಗೋತ್ರಿ ಆವರಣ ಸ್ವಚ್ಛಗೊಳಿಸಿದ ಪ್ರಜಾಪಾರ್ಟಿ!

ಮೈಸೂರು, ಜ.10(ವೈಡಿಎಸ್)- ಕರ್ನಾಟಕ ಪ್ರಜಾಪಾರ್ಟಿ(ರೈತಪರ್ವ) ವತಿಯಿಂದ ಭಾನುವಾರ ಮಾನಸಗಂಗೋತ್ರಿ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಪಕ್ಷದ ಸಂಸ್ಥಾ ಪಕ ಅಧ್ಯಕ್ಷ ಬಿ.ಶಿವಣ್ಣ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಖಂಡರು, ಭಾನುವಾರ ಬೆಳಗ್ಗೆ ಗ್ಲೌಸ್, ಮಾಸ್ಕ್ ಧರಿಸಿ, ಮಾನಸಗಂಗೋತ್ರಿ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ನೀರು, ಜ್ಯೂಸ್ ಬಾಟಲ್ ಮತ್ತಿತರ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು. ವಾಯುವಿಹಾರಿಗಳು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕೈಜೋಡಿಸಿದರು.

ಈ ವೇಳೆ ಮಾತನಾಡಿದ ಬಿ.ಶಿವಣ್ಣ ಅವರು, `ಗಂಗೋತ್ರಿಯ ಆವಣದಲ್ಲಿ ಸ್ವಚ್ಛತೆ ಕಾಪಾಡಲು ಅಲ್ಲಲ್ಲಿ ಕಸದಬುಟ್ಟಿಗಳನ್ನು ಇರಿಸಬೇಕು. ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದು ಮನವಿ ಮಾಡಿದರು. ಸ್ವಚ್ಛತಾ ಕಾರ್ಯದಲ್ಲಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೆ.ಜೆ.ಯೋಗೇಶ್, ಜಂಟಿ ಕಾರ್ಯದರ್ಶಿ ಬಿ.ಆರ್.ಲೋಕೇಶ್, ಕಾರ್ಯದರ್ಶಿ ಕೆ.ಎಸ್.ಮಹೇಶ್ ಅರಸ್, ಖಜಾಂಚಿ ಬಿ.ಆದರ್ಶ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದ್ಬೂರು ಎಂ.ಚಂದ್ರಶೇಖರ್, ಜಿಲ್ಲಾ ಸಂಚಾಲಕ ಪಿ.ಉಮೇಶ್, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ತಾರಾ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಂಚ್ಯಾ ಯೋಗೇಶ್ ಗೌಡ, ವಕೀಲ ಕುಮಾರ್, ಹೆಚ್.ಡಿ.ಕೋಟೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸೋಮೇಶ್ ಮತ್ತಿತರರಿದ್ದರು.