ರೇಷ್ಮೆ ರೀಲರ್ಸ್, ಟ್ರೇಡರ್ಸ್‍ಗಳಿಗೆ ಅಡಮಾನ ಸಾಲ ಮಿತಿ 1ರಿಂದ 2 ಲಕ್ಷಕ್ಕೆ ಏರಿಕೆ

ಬೆಂಗಳೂರು, ಮೇ 9(ಕೆಎಂಶಿ)- ಕೋವಿಡ್-19ನಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ಗಳಿಗೆ ಅಡಮಾನದ ಸಾಲ ಮಿತಿ ಯನ್ನು 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ರೇಷ್ಮೆ ಖಾತೆ ಸಚಿವ ಡಾ. ನಾರಾಯಣಗೌಡ, ರೀಲರ್ಸ್‍ಗಳ ಸಮಸ್ಯೆಗಳನ್ನು ಆಲಿಸಿ ಈ ನಿರ್ಧಾರವನ್ನು ಪ್ರಕಟಿಸಿದರು.

ರೇಷ್ಮೆಗೆ ಹೆಚ್ಚಿನ ದರ ನಿಗದಿ ಮಾಡುವ ಬಗ್ಗೆಯೂ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಆ ಬಳಿಕ ಟ್ರೇಡರ್ಸ್‍ಗಳ ಜೊತೆ ಸಭೆ ನಡೆಸಿ ಕುಂದುಕೊರತೆ ಆಲಿಸಿದ್ದಾರೆ. ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ 19 ಬರುವುದಕ್ಕೂ ಮುನ್ನ ಹೆಚ್ಚಿನ ಬೆಲೆಗೆ ರೇಷ್ಮೆ ಖರೀದಿಸಲಾಗಿತ್ತು. ಈಗ ಹೊರ ರಾಜ್ಯಗಳಲ್ಲಿ ವಹಿವಾಟು ನಡೆಸುವುದು ಕಷ್ಟವಾಗಿದೆ. ಅಲ್ಲದೆ ಹೊರ ರಾಜ್ಯಗಳಲ್ಲಿ ನಡೆಸಿದ ವಹಿವಾಟಿನ ಹಣ ಕೂಡ ಬರದೆ ಬಾಕಿಯಾಗಿದೆ. ಇದರಿಂದ ಹೊಸದಾಗಿ ಖರೀದಿಗೂ ಸಮಸ್ಯೆ ಆಗಿದೆ. ಲಾಕ್‍ಡೌನ್ ಮುಗಿದ ತಕ್ಷಣ ಚೀನಾ, ವಿಯೆಟ್ನಾಂ ಸೇರಿದಂತೆ ಬೇರೆ ಬೇರೆ ದೇಶಗಳಿಂದ ರೇಷ್ಮೆ ಆಮದಾಗುತ್ತದೆ. ಆಗ ರಾಜ್ಯದ ರೇಷ್ಮೆ ದರ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಸಚಿವರಲ್ಲಿ ಟ್ರೇಡರ್ಸ್ ಮನವಿ ಮಾಡಿದರು.

ಆಂಟಿ ಡಂಪಿಂಗ್ ಚಾರ್ಜ್ ಏರಿಕೆ ಸಂಬಂಧ ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಚಿವರು ಸಭೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ರೇಷ್ಮೆ ಆಮದಿಗೂ ಮಿತಿ ಹೇರುವ ಪ್ರಯತ್ನ ಮಾಡಲಾಗುವುದು. ಇನ್ನು ಹೊರ ರಾಜ್ಯಗಳಿಗೆ ರೇಷ್ಮೆ ಸಾಗಿಸಲು ಕಮರ್ಷಿಯಲ್ ವೆಹಿಕಲ್‍ಗೆ ಯಾವುದೇ ಸಮಸ್ಯೆ ಇಲ್ಲ. ಜೊತೆ ಅಗತ್ಯವಿದ್ದಲ್ಲಿ ಪಾಸ್ ವ್ಯವಸ್ಥೆ ಕೂಡ ಮಾಡಲಾಗುವುದು. ಈಗಾಗಲೇ ಕೊರಿಯರ್ ಸರ್ವಿಸ್ ಕೂಡ ಆರಂಭ ವಾಗಿದೆ. ಟ್ರೇಡರ್ಸ್ ಈ ಎಲ್ಲ ಸೌಲಭ್ಯ ಬಳಸಿಕೊಂಡು ವಹಿವಾಟು ನಡೆಸಬಹುದು. ಯಾವುದೇ ಸಂದರ್ಭದಲ್ಲಿ ವಹಿವಾಟು ನಡೆಸಲು ಸಮಸ್ಯೆ ಎದುರಾದರೆ ತಕ್ಷಣ ಸರ್ಕಾರ ನಿಮ್ಮ ನೆರವಿಗೆ ಬರಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.