ನಾಳೆ ಮೈಸೂರು ಪಾಲಿಕೆ ಒಳಚರಂಡಿ ಕಾರ್ಮಿಕರ ಮುಷ್ಕರ

ಮೈಸೂರು, ಜೂ.23(ಪಿಎಂ)- ತಮ್ಮನ್ನೂ ಪೌರಕಾರ್ಮಿಕರು ಎಂದು ಪರಿಗಣಿಸ ಬೇಕು, ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳನ್ನು ತಮಗೂ ಒದಗಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನೌಕರಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ 231 ಒಳಚರಂಡಿ ಕಾರ್ಮಿಕರು ಜೂ.25ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ, ಮಾಜಿ ಮೇಯರ್ ನಾರಾಯಣ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ಮೈಸೂರು ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘ ಹಾಗೂ ಒಳಚರಂಡಿ ಕಾರ್ಮಿಕರ ಸಂಘದ ನೇತೃತ್ವ ದಲ್ಲಿ ಅಂದು ಮುಷ್ಕರ ನಡೆಸುತ್ತಿದ್ದು, ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. 15 ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಪಾಲಿಕೆಯ ಎಲ್ಲಾ ಒಳಚರಂಡಿ ಕಾರ್ಮಿ ಕರು (ಯುಜಿಡಿ), ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು ಕೆಲಸ ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸ ಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಒಳಚರಂಡಿ ಕಾರ್ಮಿಕರನ್ನೂ ಪೌರಕಾರ್ಮಿಕರು ಎಂದೇ ಪರಿಗಣಿಸ ಲಾಗಿತ್ತು. ಆದರೆ ನಾಲ್ಕೈದು ವರ್ಷಗಳ ಹಿಂದೆ ಸರ್ಕಾರ ಇವರನ್ನು `ಒಳಚರಂಡಿ ಹೆಲ್ಪರ್’ ಎಂದು ವಿಂಗಡಿಸಿತು ಎಂದರು.

ಮೈಸೂರು ಮಹಾ ನಗರ ಪಾಲಿಕೆಯಲ್ಲಿ 560 ಖಾಯಂ ಮತ್ತು 1,800 ಗುತ್ತಿಗೆ ಪೌರಕಾರ್ಮಿಕರಿದ್ದಾರೆ. ಇವರಿಗೆ ಸರ್ಕಾರ ದಿಂದ ಹಲವು ಸೌಲಭ್ಯಗಳು ದೊರೆಯು ತ್ತಿವೆ. ಆದರೆ ಪೌರಕಾರ್ಮಿಕರು ಎಂದು ಪರಿಗಣಿಸದ ಹಿನ್ನೆಲೆಯಲ್ಲಿ ಒಳಚರಂಡಿ ಕಾರ್ಮಿಕರು ಎಲ್ಲಾ ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಉದಾಹರಣೆಗೆ ಪೌರ ಕಾರ್ಮಿಕರಿಗೆ ಮೂರು ವರ್ಷಗಳ ಬೆಳಗಿನ ಉಪಾಹಾರ ಭತ್ಯೆ ಬಾಕಿ ಉಳಿಸಿಕೊಳ್ಳ ಲಾಗಿತ್ತು. ಹೋರಾಟದ ಫಲವಾಗಿ ಭತ್ಯೆಯ 5.60 ಕೋಟಿ ರೂ. ಬಿಡುಗಡೆ ಯಾಯಿತು. ಇದರಿಂದ ಪೌರಕಾರ್ಮಿ ಕರಿಗೆ ತಲಾ 25 ಸಾವಿರ ರೂ. ಭತ್ಯೆ ದೊರೆ ಯಲಿದೆ. ಆದರೆ ಒಳಚರಂಡಿ ಕಾರ್ಮಿಕ ರಿಗೆ ಈ ಸೌಲಭ್ಯ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 6,800 ಮಂದಿ ಒಳಚರಂಡಿ ಕಾರ್ಮಿ ಕರು ಗುತ್ತಿಗೆ ಪದ್ಧತಿಯಡಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಇವರೆಲ್ಲರನ್ನೂ ಪೌರಕಾರ್ಮಿ ಕರು ಎಂದು ಪರಿಗಣಿಸಿ ಖಾಯಂ ಮಾಡಿ ಕೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಒಳಚರಂಡಿ ಕಾರ್ಮಿಕರು ಪೌರಕಾರ್ಮಿಕರಿಗಿಂತಲೂ ಕಠಿಣ ಕೆಲಸ ಮಾಡಬೇಕಿದೆ. ಆದರೂ ಇವರನ್ನು ಪೌರಕಾರ್ಮಿಕರು ಎಂದು ಪರಿಗಣಿಸದೆ ಬೇರ್ಪಡಿಸಿದ್ದು ಏಕೆಂದು ಅರ್ಥವಾಗು ತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೌರಕಾರ್ಮಿಕ ಮುಖಂಡ ಎನ್. ಮಾರ, ನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಮಹದೇವ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಪಾಲಿಕೆ ಒಳಚರಂಡಿ ಕಾರ್ಮಿಕರ ಸಂಘದ ಅಧ್ಯಕ್ಷ ಪಳನಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು