ಫೆ.18ರಂದು ಮೈಸೂರು ನಗರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಸಮ್ಮೇಳನಾಧ್ಯಕ್ಷೆ ಲೇಖಕಿ ಆರ್ಯಾಂಬ ಪಟ್ಟಾಭಿ ಅವರಿಗೆ ಅಧಿಕೃತ ಆಹ್ವಾನ

ಮೈಸೂರು, ಫೆ.15( ಪಿಎಂ)-ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ವತಿಯಿಂದ ಫೆ.18ರಂದು ಪ್ರಥಮ ಬಾರಿಗೆ ನಗರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾದಂಬರಿಕಾರ್ತಿ ಹಾಗೂ ಹಿರಿಯ ಲೇಖಕಿ ಆರ್ಯಾಂಬ ಪಟ್ಟಾಭಿ ಅವರಿಗೆ ಸೋಮವಾರ ಅಧಿಕೃತ ಆಹ್ವಾನ ನೀಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಆರ್ಯಾಂಬ ಪಟ್ಟಾಭಿ ಅವರ ನಿವಾಸಕ್ಕೆ ತೆರಳಿ, ಆಹ್ವಾನ ಪತ್ರಿಕೆ ನೀಡಿ ಆಹ್ವಾನ ಕೋರಲಾಯಿತು. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಫೆ.18ರಂದು ನಗರ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೇಖಕಿ ಆರ್ಯಾಂಬ ಪಟ್ಟಾಭಿ ಅವರನ್ನು ಸದರಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರ ಶೇಖರ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಮುಖಂಡರಾದ ಡಾ.ಸಿ.ವೆಂಕಟೇಶ್, ಎಂ.ಲೋಕೇಶ್‍ಕುಮಾರ್, ಆರ್.ಕೆ.ರವಿ ಮತ್ತಿತರರು ಹಾಜರಿದ್ದರು.