ಮೈಸೂರು ಕೊಡವ ಸಮಾಜದಿಂದ ಜ.ಕೆ.ಎಸ್.ತಿಮ್ಮಯ್ಯ ಜನ್ಮ ದಿನಾಚರಣೆ

ಮೈಸೂರು: ಮೈಸೂರು ಕೊಡವ ಸಮಾಜದ ವತಿಯಿಂದ ಭಾನುವಾರ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 113ನೇ ಜನ್ಮ ದಿನ ಆಚರಿಸಲಾಯಿತು.

ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಕೊಡವ ಸಮಾಜ ಸಭಾಂಗಣದಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಸಮಾಜದ ಅಧ್ಯಕ್ಷ ಬಿ.ನಾಣಯ್ಯ ಮತ್ತು ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರಲ್ ತಿಮ್ಮಯ್ಯ ಬಹು ದೊಡ್ಡ ದೇಶಪ್ರೇಮಿ. ತಮ್ಮ ಜೀವಿತದ ಅವಧಿಯನ್ನು ದೇಶಕ್ಕೆ ಸಮರ್ಪಿಸಿಕೊಂಡಿದ್ದರು ಎಂದರು. ಉಪಾಧ್ಯಕ್ಷ ಕೆ.ಸಿ.ಬೆಳ್ಳಿಯಪ್ಪ ಮಾತನಾಡಿ, ಶಿಸ್ತು ಮತ್ತು ಸಮಗ್ರತೆಗೆ ಮತ್ತೊಂದು ಹೆಸರೇ ಜನರಲ್ ತಿಮ್ಮಯ್ಯ ಎಂದು ಹೇಳಿದರು.

ಕೊಡವ ಸಮಾಜದ ಕಾರ್ಯದರ್ಶಿ ಎಂ.ಎಂ.ಪೊನ್ನಪ್ಪ, ಮಾಜಿ ಅಧ್ಯಕ್ಷರಾದ ಡಾ.ಎ.ಎ.ಕುಟ್ಟಪ್ಪ, ಕೆ.ಕಾರಿಯಪ್ಪ, ಎಂ.ಕರುಂಬಯ್ಯ, ಎಂ.ಕುಟ್ಟಪ್ಪ, ಕೊಡವ ಕಾವೇರಿ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷೆ ಡಾಟ್ಟಿ ಕಾವೇರಪ್ಪ ಉಪಸ್ಥಿತರಿದ್ದರು.