ನಂಜನಗೂಡು ನಗರ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದ ಮಲಿನ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

ಬೆಂಗಳೂರು, ಜ.29- ನಂಜನಗೂಡು ನಗರದ ಹಳೆಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ನಿರ್ವಹಣೆಯ ಬಗ್ಗೆ ಸಾರಿಗೆ ನಿಗಮ ಮತ್ತು ಪುರಸಭೆಯ ಮಧ್ಯೆ ಯಾವುದೇ ಗೊಂದಲ ಗಳಿಲ್ಲ. ಈ ಶೌಚಾಲಯದ ಮಲೀನ ನೀರಿನ ಸಮಸ್ಯೆ ನಿವಾರಣೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ, ನಗರಸಭೆಯನ್ನು ಕೋರಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಶುಕ್ರವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ನಂಜನಗೂಡು ನಗರ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ವಹಣೆ ಬಗ್ಗೆ ನಗರಸಭೆ ಮತ್ತು ರಾಜ್ಯರಸ್ತೆ ಸಾರಿಗೆ ಸಂಸ್ಥೆ ಮಧ್ಯೆ ಪರಸ್ಪರ ಗೊಂದಲ ಉಂಟಾಗಿದ್ದು, ಶೌಚಾಲಯ ವನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲದ ಬಗ್ಗೆ ಸಂದೇಶ್ ನಾಗರಾಜ್ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರಿಸಿದರು. ಶೌಚಾಲಯದ ಮಲೀನ ನೀರನ್ನು ಸಂಗ್ರಹಿಸಲು ಸೆಪ್ಟಿಕ್ ಟ್ಯಾಂಕ್, ಇಂಗುಗುಂಡಿ ನಿರ್ಮಿಸಲಾಗಿದೆ. ಈ ಮಲೀನಯುಕ್ತ ನೀರನ್ನು ಹೊರಕ್ಕೆ ಸಾಗಿಸಲು ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ನಗರಸಭೆಯನ್ನು ಕೋರಲಾಗಿದೆ. ಈಗ ಬಸ್ ನಿಲ್ದಾಣವನ್ನು ನೂತನವಾಗಿ ನಿರ್ಮಿ ಸಿರುವ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದು, ಅಲ್ಲಿ ಪ್ರಯಾಣಿಕರಿಗೆ ಸುಸಜ್ಜಿತ ಶೌಚಾಲಯ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ ಎಂದು ಸಚಿವರು ತಿಳಿಸಿದರು.