ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಪಾರಂಪರಿಕ ಕಟ್ಟಡಗಳಿಗೆ ಸದ್ಯಕ್ಕಿಲ್ಲ ಕಾಯಕಲ

ಮೈಸೂರು,ಏ.22- ದೇಶದ ಜನಜೀವನ, ಆರ್ಥಿ ಕತೆಯನ್ನೇ ಬುಡಮೇಲು ಮಾಡಿರುವ ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಎಂಬ ಕರಿನೆರಳು ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೊರೊನಾ ವೈರಸ್ ಮಾರಣಾಂತಿಕ ಸೋಂಕು ಹರಡದಂತೆ ನಿಯಂತ್ರಿಸುವುದು ಹಾಗೂ ಸೋಂಕಿತ ರಿಗೆ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ತಪ್ಪಿಸಲು ಸರ್ಕಾರ ಅತೀ ಹೆಚ್ಚು ಅನುದಾನವನ್ನು ಖರ್ಚು ಮಾಡಬೇಕಾಗಿದೆ. ವ್ಯಾಪಾರ, ವಹಿವಾಟು, ಉತ್ಪನ್ನ ಗಳು ಸಂಪೂರ್ಣ ಬಂದ್ ಆಗಿರುವುದರಿಂದ ಸರ್ಕಾ ರಕ್ಕೆ ಬರುತ್ತಿದ್ದ ಎಲ್ಲಾ ಮೂಲಗಳ ಆದಾಯವೂ ಸ್ಥಗಿತ ಗೊಂಡಿದ್ದಾಗ್ಯೂ ಜನರಿಗೆ ಬದುಕಲು ಅವಶ್ಯವಿರುವ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವುದೂ ಸರ್ಕಾರದ ಆದ್ಯ ಜವಾಬ್ದಾರಿಯಾಗಿರುವ ಕಾರಣ, ಈಗ ರಾಜ್ಯದ ಬೊಕ್ಕಸ ಖಾಲಿಯಾಗಿ ಆರ್ಥಿಕ ಸಂಕಷ್ಟ ಎದುರಾಗಿ ದ್ದರೂ, ಸರ್ಕಾರಿ ನೌಕರರಿಗೆ ಸಂಬಳವನ್ನಂತೂ ಕೊಡಲೇ ಬೇಕಾಗಿರುವುದು ಮತ್ತೊಂದು ಸವಾಲಾಗಿದೆ.

ಇದರಿಂದಾಗಿ ಇತ್ತೀಚೆಗಷ್ಟೇ ಪ್ರಕಟಿಸಿದ ಹೊಸ ಯೋಜನೆಗಳು, ಹಾಲಿ ಪ್ರಗತಿಯಲ್ಲಿದ್ದ ಅಭಿವೃದ್ಧಿ ಕಾಮ ಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ದಲ್ಲಿ ಹಣದ ಕೊರತೆ ಎದುರಾಗಿರುವುದು ಸ್ವಾಭಾವಿಕ.

ಪಾರಂಪರಿಕ ಕಟ್ಟಡಗಳು: ಸಂಪೂರ್ಣ ಶಿಥಿಲ ಗೊಂಡು ಅಪಾಯದ ಅಂಚಿನಲ್ಲಿರುವ ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗಳ ಪುನರ್ ನಿರ್ಮಾಣ ಯೋಜನೆ ಸಾಕಾರಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅನುಮಾನವೇ ಸರಿ.

ಲಾಕ್‍ಡೌನ್ ನಿರ್ಬಂಧದಿಂದ ಉಂಟಾಗಿರುವ ನಷ್ಟ ಸರಿದೂಗಿಸಿ ಜನ ಜೀವನವನ್ನು ಸಹಜಸ್ಥಿತಿಗೆ ತರು ವುದೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಸವಾಲಾಗಿರುವುದರಿಂದ ಸದ್ಯಕ್ಕೆ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆಗಳ ಹಳೇ ಕಟ್ಟಡವನ್ನು ನೆಲಸಮಗೊಳಿಸಿ ಪಾರಂಪರಿಕ ವಿನ್ಯಾಸದೊಂದಿಗೆ ಪುನರ್ ನಿರ್ಮಾಣ ಮಾಡುವುದಂತೂ ಸದ್ಯದ ಪರಿ ಸ್ಥಿತಿಯಲ್ಲಿ ಸಾಧ್ಯವಾಗದ ಮಾತು.

ಈ ಪಾರಂಪರಿಕ ಕಟ್ಟಡಗಳನ್ನು ಯಥಾಸ್ಥಿತಿ ನವೀ ಕರಿಸಿ ಉಳಿಸಿಕೊಳ್ಳಬೇಕೆಂದು ಪ್ರಾಚ್ಯವಸ್ತು ಮತ್ತು ಪಾರಂ ಪರಿಕ ತಜ್ಞರು ಅಭಿಪ್ರಾಯಿಸಿದ್ದರೆ, ಸಂಪೂರ್ಣ ಶಿಥಿಲ ಗೊಂಡು ಅಪಾಯದ ಅಂಚಿನಲ್ಲಿರುವುದರಿಂದ ಅವುಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡು ವುದೇ ಲೇಸು ಎಂದು ಜಿಲ್ಲಾ ಮಟ್ಟದ ವಿಶೇಷ ಪಾರಂ ಪರಿಕ ತಜ್ಞರ ಸಮಿತಿಯು ವರದಿ ನೀಡಿತ್ತು.

ಈ ಎರಡೂ ವರದಿಗಳಿಂದ ಉಂಟಾಗಿದ್ದ ಗೊಂದಲ ಮಯ ಅಭಿಪ್ರಾಯಗಳ ಹಿನ್ನೆಲೆಯಲ್ಲಿ 2019ರ ಡಿಸೆಂ ಬರ್ 2ರಂದು ತಜ್ಞರ ಸಮಿತಿಯ 3ನೇ ಸಭೆಯ ಶಿಫಾ ರಸ್ಸಿನಂತೆ ಸಾರ್ವಜನಿಕರ ಸುರಕ್ಷತೆಯನ್ನು ಗಮನ ದಲ್ಲಿರಿಸಿಕೊಂಡು ಈ ಪಾರಂಪರಿಕ ಕಟ್ಟಡಗಳನ್ನು ತೆರವು ಗೊಳಿಸಿ ಹಾಲಿ ಇರುವ ಕಟ್ಟಡಗಳ ಎತ್ತರಕ್ಕೆ ಸೀಮಿತವಾಗಿ ಪ್ರಸ್ತುತ ಪಾರಂಪರಿಕ ಶೈಲಿ, ವಿನ್ಯಾಸ ಹಾಗೂ ಮಾದರಿ ಯಲ್ಲೇ ಹೊಸ ನಿಯಮಾನುಸಾರ ಕಟ್ಟಡಗಳ ಪುನರ್ ನಿರ್ಮಾಣ ಮಾಡಬೇಕೆಂದು 2020ರ ಜನವರಿ 30 ರಂದು ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣ ಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮುಂದಿನ ಪ್ರಕ್ರಿಯೆ ಸ್ಥಗಿತ: ಪಾರಂಪರಿಕ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಕೋರಿ ಪಾಲಿಕೆ ನಿರ್ಣಯದಂತೆ ಮೈಸೂರು ಜಿಲ್ಲಾಡಳಿತ ವೇನೋ ಪತ್ರ ಬರೆದಿತ್ತಾದರೂ, ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಷ್ಟರಲ್ಲಿ ಬಜೆಟ್ ಕಲಾಪ ಆರಂಭ ವಾಯಿತು. ಅದರ ಬೆನ್ನಲ್ಲೇ ಮಹಾಮಾರಿ ಕೊರೊನಾ ವೈರಸ್ ಹರಡಲಾರಂಭಿಸಿದ್ದರಿಂದ ದೇಶದಾದ್ಯಂತ ಲಾಕ್‍ಡೌನ್ ನಿರ್ಬಂಧ ಹೇರಲಾಯಿತು.

ಸದ್ಯಕ್ಕಿಲ್ಲ ಕಾಯಕಲ್ಪ: ಇದೀಗ ಬಂದೊದಗಿರುವ ಕೊರೊನಾ ಸಂಕಷ್ಟದಿಂದ ಹೊರ ಬಂದು ಜನ ಜೀವನ ಸಹಜ ಸ್ಥಿತಿಗೆ ಬರಲು ಇನ್ನೂ ಹಲವು ತಿಂಗಳ ಕಾಲ ಬೇಕಾಗುತ್ತದೆ. ಆದ್ಯತಾ ವಲಯಕ್ಕೆ ಮೊದಲು ಅನು ದಾನ ನೀಡಬೇಕಾಗಿರುವ ಕಾರಣ, ಕಟ್ಟಡ ನವೀಕರಣ ಅಥವಾ ಪುನರ್ ನಿರ್ಮಾಣ ಯೋಜನೆಗಳಿಗಂತೂ ಸದ್ಯಕ್ಕೆ ಅವಕಾಶವಿರುವುದಿಲ್ಲ. ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸ ಬೇಕು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ ಕೈಗೊಳ್ಳಬೇಕು, ಆಡಳಿತಾತ್ಮಕ ಅನುಮೋದನೆ ನೀಡಿದ ನಂತರವಷ್ಟೇ ಡಿಪಿಆರ್ ಸಿದ್ಧಗೊಳಿಸಿ ತಾಂತ್ರಿಕ ಅನು ಮೋದನೆ ಪಡೆದುಕೊಂಡ ಬಳಿಕವೇ ಈ ಯೋಜನೆ ಅನುಷ್ಠಾನದ ಪ್ರಕ್ರಿಯೆಗೆ ಚಾಲನೆ ದೊರೆಯಬಹುದು.

ಆದರೆ, ಕೊರೊನಾ ವೈರಸ್‍ನಿಂದ ರಾಜ್ಯ ಎದುರಿ ಸುತ್ತಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಮೈಸೂರಿನ ಹೃದಯ ಭಾಗದ ಈ ಪಾರಂಪರಿಕ ಕಟ್ಟಡಗಳಿಗೆ ಕಾಯ ಕಲ್ಪ ನೀಡಬೇಕೆಂದರೆ ಕನಿಷ್ಠ 6 ತಿಂಗಳ ಕಾಲ ಬೇಕಾಗಬಹುದು. ಅಂದರೆ ಪುನರ್ ನಿರ್ಮಾಣ ಕೆಲಸ ವರ್ಷ ಮುಂದಕ್ಕೋದರೂ ಅಚ್ಚರಿ ಪಡಬೇಕಿಲ್ಲ.

ಎಸ್.ಟಿ.ರವಿಕುಮಾರ್