ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಯುವರಾಜ ಯದುವೀರ್ ಚಾಲನೆ

ಮೈಸೂರು:  ಪರಿಸರ ದಿನಾಚರಣೆಯಂದು ಮಾತ್ರ ಸಸಿ ನೆಟ್ಟು ಕಾಳಜಿ ವಹಿಸಿದರೆ, ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮ ಬದುಕಿನ ಪ್ರಮುಖ ಭಾಗವಾಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಮೈಸೂರು ಹೆಬ್ಬಾಳಿನ ಸಿಐಟಿಬಿ ಛತ್ರದ ಸಮೀಪದ ಮೈದಾನದಲ್ಲಿ ನವಭಾರತ ನಿರ್ಮಾಣ್ ಸೇವಾ ಟ್ರಸ್ಟ್, ಸ್ವಚ್ಛಂದ ಸಂಸ್ಥೆ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಜಿಸಿ, ಪರ್ಯಾಯ ವಸ್ತುಗಳನ್ನು ಬಳಕೆ ಮಾಡಲು ಹೆಚ್ಚಿನ ಆದ್ಯತೆ ನೀಡಬೇಕಿದೆ. ಹಿರಿಯರು-ಕಿರಿಯರು ಹಾಗೂ ಯುವ ಸಮುದಾಯ ಸೇರಿದಂತೆ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ನಮ್ಮ ದಿನನಿತ್ಯದ ಭಾಗವಾಗಬೇಕು. ಮೈಸೂರು ನಗರದೊಳಗೆ ಮರಗಳು ಉಳಿದಿದ್ದು, ಉತ್ತಮ ಗಾಳಿ, ಪರಿಸರ ಇದರಿಂದ ಸಾಧ್ಯವಾಗಿದೆ. ಎಂದು ಹೇಳಿದರು.

ರಘುಲಾಲ್ ಅಂಡ್ ಕಂಪನಿಯ ಮಾಲೀಕರೂ ಆದ ಪರಿಸರ ಪ್ರೇಮಿ ರಾಘವನ್ ಅತಿಥಿಯಾಗಿ ಪಾಲ್ಗೊಂಡಿದ್ದರು. ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ.ಶ್ರೀಧರ್, ಥಿಯೇರಮ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಭಾಸ್ಕರ್ ಕಳಲೆ, ನಗರಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಮತ್ತಿತರರು ಹಾಜರಿದ್ದರು.