ಲೋಕಸಭಾ ಚುನಾವಣೆಗೆ ಕಾಂಗ್ರೆಸ್  ಪಕ್ಷವನ್ನು ಸದೃಢಗೊಳಿಸಲು `ಶಕ್ತಿ ಯೋಜನೆ’

7045006100 ಸಂಖ್ಯೆಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿ ಎಸ್‍ಎಂಎಸ್ ಕಳಿಸಿದರೆ ಸಾಕು ಸದಸ್ಯತ್ವ ನೋಂದಣಿ
ಮೈಸೂರು:  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ದೇಶಾದ್ಯಂತ `ಶಕ್ತಿ ಯೋಜನೆ’ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ. ಅದಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆ ನಡೆದಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.

ಮೈಸೂ ರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ನಿರ್ದೇಶನದ ಮೇರೆಗೆ ಶಕ್ತಿ ಯೋಜನೆ ಯನ್ನು ತೀವ್ರಗೊಳಿಸಲಾಗಿದೆ ಎಂದರು.

ದೇಶಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರ ದಲ್ಲಿ ಪಕ್ಷಕ್ಕೆ ಕನಿಷ್ಟ 60 ಸಾವಿರ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಯನ್ನು ಹೊಂದಲಾಗಿದ್ದು, ಅದರಂತೆ ಪಕ್ಷದ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸುವಂತೆ ಸಲಹೆ ನೀಡಿದರು.

ಸದಸ್ಯತ್ವ ನೋಂದಣಿ ಕುರಿತು ವಿವರಿಸಿದ ಅವರು, ಮತದಾರರು ತಮ್ಮ ಮತದಾರರ ಗುರುತಿನ ಕಾರ್ಡ್ (ಐಡಿ ಕಾರ್ಡ್)ನ ಎಪಿಕ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ 70450-06100 ಈ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಿದರೆ, ಅತ್ತ ಕಡೆಯಿಂದ ಕೆಲವೇ ನಿಮಿಷಗಳಲ್ಲಿ ಸದಸ್ಯತ್ವ ನೋಂದಣಿಯಾಗಿರುವ ಕುರಿತು ಅಭಿನಂದನಾ ಸಂದೇಶ ಬರುತ್ತದೆ ಎಂದರು. ಇದಕ್ಕೆ ಜಿಲ್ಲೆಯ ಕಾರ್ಯಕರ್ತರು ಸಾರ್ವಜನಿಕರಿಗೆ ಪಕ್ಷದ ಸಿದ್ದಾಂತವನ್ನು ವಿವರಿಸಿ ಅವರನ್ನು ಪಕ್ಷಕ್ಕೆ ಸೇರಲು ಮನವಿ ಮಾಡುವಂತೆ ಸಲಹೆ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷದ ಹಿಂದುಳಿದ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಮಾರುತಿ, ಪಕ್ಷದ ಮುಖಂಡರಾದ ಯಡದೊರೆ ಮಂಜುನಾಥ್, ಮಂಚನಹಳ್ಳಿ ರಘು ಇನ್ನಿತರರಿದ್ದರು.