ಖಾಸಗಿ ಆಸ್ಪತ್ರೆ ಐಸಿಯು ಧ್ವಂಸ: ಇಬ್ಬರ ಬಂಧನ

ಮೈಸೂರು:  ಎರಡು ತಿಂಗಳ ಹಿಂದೆ ದಾಖಲಾಗಿದ್ದ ಯುವಕ ಸಾವಿ ಗೀಡಾದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿ, ಐಸಿಯು ಪರಿಕರಗಳನ್ನು ನಾಶ ಮಾಡಿದ ಆರೋಪದಡಿ ಇಬ್ಬರನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ರಾಘವೇಂದ್ರ ಬಡಾವಣೆ ನಿವಾಸಿಗಳಾದ ಎಂ.ಎಸ್.ಮನೋ ಹರ್(24) ಹಾಗೂ ನಸ್ರುಲ್ಲಾ(35) ಬಂಧಿತರು. ಪ್ರೀತಂ ಎಂಬುವವರ ಸ್ಥಿತಿ ಗಂಭೀರ ವಾಗಿದ್ದರಿಂದ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅ.1ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಆತನ ಸ್ನೇಹಿತರು ಗುಂಪು ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಗಲಾಟೆ ಮಾಡಿ, ಕರ್ತವ್ಯ ನಿರತ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಯ ಪರಿಕರಗಳನ್ನು ದ್ವಂಸ ಮಾಡಿದ್ದರು. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಹರ್, ನಸ್ರುಲ್ಲಾ ಅವರನ್ನು ಅ.24ರಂದು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.