ಪ್ರೊ. ಕೆ.ಎಸ್.ಭಗವಾನ್ ಹತ್ಯೆಗೆ  ಶ್ರೀರಂಗಪಟ್ಟಣ ಯುವಕನಿಗೆ ಸುಪಾರಿ

ಮೈಸೂರು: ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಹತ್ಯೆಗೆ ಗೌರಿ ಲಂಕೇಶ್ ಹತ್ಯೆ ಆರೋಪಿ ಹೊಟ್ಟೆ ಮಂಜ, ಶ್ರೀರಂಗಪಟ್ಟಣ ಮೂಲದ ಯುವಕನೊಬ್ಬನಿಗೆ ಸುಪಾರಿ ನೀಡಿದ್ದ ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ. ಪತ್ರಕರ್ತೆ ಗೌರಿಲಂಕೇಶ್ ಕೊಲೆ ಆರೋಪಿ ಹೊಟ್ಟೆ ಮಂಜ ವಿಚಾರಣೆ ವೇಳೆ ಈ ವಿಷಯವನ್ನು ವಿಶೇಷ ತನಿಖಾ ದಳ (SIT)ದ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ. ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೈಯ್ಯಲು ತಾನು ಶ್ರೀರಂಗ ಪಟ್ಟಣದ ಅನಿಲ್ ಎಂಬಾತನಿಗೆ ಸುಪಾರಿ ನೀಡಿದ್ದಾಗಿ ಆತ ಹೇಳಿದ್ದು, ಅದಕ್ಕಾಗಿ ಕೊಳ್ಳೇಗಾಲದ ಅರಣ್ಯ ಪ್ರದೇಶದಲ್ಲಿ ಅನಿಲ್‍ಗೆ 1 ತಿಂಗಳ ಕಾಲ ಏರ್ ಗನ್‍ನಿಂದ ತರಬೇತಿ ನೀಡಲಾಗಿತ್ತು. ಅದಕ್ಕಾಗಿ ಮೈಸೂರಿನಲ್ಲಿ ಏರ್‍ಗನ್ ಅನ್ನೂ ಖರೀದಿಸಲಾಗಿತ್ತು ಎಂಬ ವಿಷಯವನ್ನು ಎಸ್‍ಐಟಿ ಅಧಿಕಾರಿಗಳು ಹೊಟ್ಟೆ ಮಂಜನಿಂದ ಬಾಯ್ಬಿಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು `ಮೈಸೂರು ಮಿತ್ರ’ನಲ್ಲಿ ಪ್ರತಿಕ್ರಿಯಿಸಿದ ಪ್ರೊ. ಭಗವಾನ್ ಅವರು `ನನ್ನ ಹತ್ಯೆಗೆ ಶ್ರೀರಂಗಪಟ್ಟಣದ ಯುವಕನಿಗೆ ಸುಪಾರಿ ನೀಡಲಾಗಿತ್ತು ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನನಗೆ ಅಂಗ ರಕ್ಷಕರ ಭದ್ರತೆ ನೀಡಲಾಗಿತ್ತು. ಅದು ಈಗಲೂ ಮುಂದುವರೆದಿದೆ. ನಾನು ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ಮಾಡುತ್ತಿಲ್ಲ. ಅಧ್ಯಯನ ನಡೆಸಿ ಪ್ರಗತಿಪರವಾಗಿ ಮಾತನಾಡು ವುದೇ ಕಷ್ಟವಾಗಿ ಬಿಟ್ಟಿದೆ. ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ’ ಎಂದರು.