ಬಜೆಟ್‍ನಲ್ಲಿ ರೈತರ ಬೇಡಿಕೆ ಈಡೇರಿಸದಿದ್ದರೆ ಹೋರಾಟ

ಮೈಸೂರು: ರಾಜ್ಯದಲ್ಲಿ ರೈತರು, ಕಾರ್ಮಿಕರ ಸ್ಥಿತಿ ಶೋಚನೀಯ ವಾಗಿದ್ದು, ರಾಜ್ಯ ಸರ್ಕಾರ 2020ರ ಮುಂಗಡಪತ್ರದಲ್ಲಿ ರೈತರ ಬೇಡಿಕೆಗಳಿಗೆ ಅನುದಾನ ಕಾಯ್ದಿರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಜವರೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈವರೆಗಿನ ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರ ಹಿತ ರಕ್ಷಿಸುವ ಯೋಜನೆ ರೂಪಿಸುವಲ್ಲಿ ವಿಫಲವಾಗಿವೆ. ಇದರಿಂದ ರೈತರ ಆತ್ಮಹತ್ಯೆ ನಡೆಯುತ್ತಲೇ ಇವೆ. ಈ ನಡುವೆ ಬೆಲೆ ಕುಸಿತ, ಅತಿವೃಷ್ಟಿ, ಬರ, ಉತ್ಪಾದನಾ ವೆಚ್ಚ ಹೆಚ್ಚಳ ರೈತವರ್ಗ ತತ್ತರಿಸಿದೆ. ಪಿಎಲ್‍ಡಿ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ರೈತ ಕಲ್ಯಾಣನಿಧಿ ಸ್ಥಾಪಿಸಬೇಕು. ಕೃಷಿಯನ್ನು ಉದ್ಯಮ ಎಂದು ಘೋಷಿಸಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಜೆಟ್‍ನಲ್ಲಿ ಕಾರ್ಯಕ್ರಮ ರೂಪಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದೇವರಾಜು, ಕೊಡಗು ಜಿಲ್ಲಾಧ್ಯಕ್ಷ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.