ಮೈಸೂರು, ಮೇ 8(ಆರ್ಕೆ)- ಮೂರು ದಿನಗಳ ಹಿಂದಷ್ಟೇ ಯುವಕನ ಕೊಲೆಯಾಗಿದ್ದು, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆರೋಪಿ ಸಹೋದರ ಅಭಿಷೇಕ್ನನ್ನು ಹತ್ಯೆಗೈದಿದ್ದ ಮಹೇಂದ್ರ ಮತ್ತು ಇರ್ಫಾನ್ ಖಾನ್ನನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಕಳೆದ ರಾತ್ರಿಯೇ ಬಂಧಿಸಲಾಗಿದ್ದ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ ನಜರ್ಬಾದ್ ಠಾಣೆ ಇನ್ಸ್ಪೆಕ್ಟರ್ ಜಿ.ಎನ್. ಶ್ರೀಕಾಂತ್, ಮಧ್ಯಾಹ್ನ ನ್ಯಾಯಾಧೀಶರ ನಿವಾಸದಲ್ಲಿ ಹಾಜರು ಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಸತೀಶನನ್ನು ಕೊಲೆಗೈದಿದ್ದ ಪೈಕಿ ಕಿರಣ್ ಸಹೋದರನಾದ ಅಭಿಷೇಕ್ನನ್ನು ಗುರುವಾರ ರಾತ್ರಿ ಇರ್ಫಾನ್ ಖಾನ್ ಮತ್ತು ಮಹೇಂದ್ರ, ಬಟನ್ ಚಾಕುವಿನಿಂದ ಹೊಟ್ಟೆ, ಪಕ್ಕೆ, ಕುತ್ತಿಗೆ ಭಾಗಕ್ಕೆ ಮನಸ್ಸೋ ಇಚ್ಛೆ ಇರಿದು ಹತ್ಯೆಗೈದಿದ್ದರು. ಸತೀಶನ ಕೊಲೆಗೆ ಪ್ರತೀ ಕಾರವಾಗಿ ಅಭಿಷೇಕ್ನನ್ನು ಮುಗಿಸಿದ್ದೇವೆ ಎಂದು ಆರೋಪಿ ಗಳು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಇಂದು ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ್, ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಪೂಣಚ್ಚ, ನಜರ್ಬಾದ್ ಇನ್ಸ್ಪೆಕ್ಟರ್ ಜಿ.ಎನ್. ಶ್ರೀಕಾಂತ್ ಕ್ಯಾತಮಾರನ ಹಳ್ಳಿ ಹಾಗೂ ಗಾಯತ್ರಿಪುರಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಿಕೆಟಿಂಗ್ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಧ್ವನಿವರ್ಧಕಗಳಲ್ಲಿ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋ ಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನಜರ್ಬಾದ್ ಠಾಣೆ ಪೊಲೀಸರು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಭಿಷೇಕ್ ದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.