ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ರಾಮನಾಥಪುರ: ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೂ ನಾನು ಬದ್ಧನಾಗಿದ್ದು, ಎಲ್ಲಾ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡಿ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಹಾಗೂ ಗ್ರಾಮಗಳ ನೈರ್ಮಲ್ಯ, ಕುಡಿಯುವ ನೀರು, ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಪಟ್ಟಾಭಿರಾಮ ಪ್ರೌಢಶಾಲೆಯ ಆವರಣ ದಲ್ಲಿ ಮಂಗಳವಾರ ರಾಮನಾಥಪುರ-ಕೊಣನೂರು 34 ಕಿಮೀ ರಸ್ತೆ, ಮಾಗಡಿ, ಹುಲಿಯೂರುದುರ್ಗ, ನಾಗಮಂಗಲ, ಕೆ.ಆರ್.ಪೇಟೆ, ರಾಮನಾಥಪುರ, ಸೋಮ ವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ, ರಾಮ ನಾಥಪುರ ರೇಷ್ಮೆ ತರಬೇತಿ ಸಂಸ್ಥೆ ಕಟ್ಟಡ ಶಂಕುಸ್ಥಾಪನೆ ನೇರವೇರಿಸಿದ ನಂತರ ಅವರು ಮಾತನಾಡಿದರು.

190 ಕೋಟಿ ವೆಚ್ಚದಡಿ 200 ಕೆರೆ-ಕಟ್ಟೆಗಳ ಭರ್ತಿ, 380 ಕೋಟಿ ವೆಚ್ಚದಡಿ ಕಟ್ಟೇಪುರ ಏತ ನೀರಾವರಿ ಯೋಜನೆ, 302 ಕೋಟಿ ವೆಚ್ಚದಡಿ ಹೇಮಾವತಿ ಬಲ ದಂಡೆ ನಾಲೆ ಆಧುನೀಕರಣ ಕಾಮಗಾರಿ, 116ಕೋಟಿ ವೆಚ್ಚದಡಿ ಹೇಮಾವತಿ ಬಲ ದಂಡೆ ನಾಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿ, 76 ಕೋಟಿ ವೆಚ್ಚದಡಿ ಹಾರಂಗಿ ನಾಲಾ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆಗಸ್ಟ್‍ನಲ್ಲಿ ಸರ್ಕಾರ ಬೀಳಿಸುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಆಗಸ್ಟ್ ನಂತರವೂ ನಮ್ಮ ಸರ್ಕಾರ ಮುಂದು ವರಿಯಲಿದೆ. ಬಂಡೀಪುರ ಅಭಯಾರಣ್ಯ ದಲ್ಲಿ ಕಾಣಿಸಿಕೊಂಡಿರುವ ಬೆಂಕಿ ನಂದಿ ಸಲು ಸೇನಾ ಹೆಲಿಕಾಪ್ಟರ್ ಬಳಕೆ ಮಾಡ ಲಾಗುತ್ತಿದೆ. ಅಲ್ಲದೇ ಹಿರಿಯ ಅಧಿಕಾರಿ ಗಳ ಜೊತೆ ಚರ್ಚಿಸಲಾಗಿದ್ದು, ಬೆಂಕಿ ನಂದಿಸಲು ಶೀಘ್ರವೇ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಶಾಸಕರಾದ ಎ.ಟಿ.ರಾಮಸ್ವಾಮಿ, ಗೋಪಾಲ ಸ್ವಾಮಿ, ಮುಖಂಡ ರಂಗಸ್ವಾಮಿ ಹಾಜರಿದ್ದರು.