‘ಮಿನುಗುವ ನಕ್ಷತ್ರ-2022’ ಪ್ರಶಸ್ತಿ ಪ್ರದಾನ

ಮೈಸೂರು,ಜ.12(ಎಂಕೆ)-ಸಮಾಜದ ಅಂಕು-ಡೊಂಕು, ತಾರತಮ್ಯಗಳನ್ನು ತಿದ್ದುವ ಕೆಲಸವನ್ನು ರಂಗಭೂಮಿ ಮಾಡಲಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು.

ಮೈಸೂರು ಕಲಾಮಂದಿರದ ಕಿರುರಂಗಮಂದಿರದಲ್ಲಿ ನಡೆದ ನಕ್ಷತ್ರ ಪೌಂಡೇಶನ್‍ನ ಮಹಿಳಾ ಮತ್ತು ಯುವ ಘಟಕ ಉದ್ಘಾಟನೆ ಹಾಗೂ ‘ಮಿನುಗುವ ನಕ್ಷತ್ರ-2022’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ರಂಗಭೂಮಿಯತ್ತ ಹೆಚ್ಚೆಚ್ಚು ಬರುತ್ತಿದ್ದಾರೆ. ಏಕೆಂದರೆ ಯುವಕರಲ್ಲಿ ಕ್ರಿಯೇಟಿವಿಟಿ ಎಂಬುದು ಬೆಳೆಯುವುದೇ ರಂಗಭೂಮಿಯಲ್ಲಿ ಎಂದು ಹೇಳಿದರು.

ರಂಗಭೂಮಿಯಲ್ಲಿರುವವರ ಬದುಕು ಕಷ್ಟವಾದರೂ ಅಭಿನಯದ ಹುಚ್ಚು ಅವರನ್ನು ಬಿಡುವುದಿಲ್ಲ. ಅದಕ್ಕೆ ಸತೀಶ್ ಹೊನ್ನಾಚಿ ಉದಾಹರಣೆ. ನಕ್ಷತ್ರ ಮಹಿಳಾ ಮತ್ತು ಯುವ ಘಟಕವನ್ನು ಪ್ರಾರಂಭಿಸುವ ಮೂಲಕ ಯುವಕರಿಗೆ ರಂಗಭೂಮಿಯಲ್ಲಿ ಹೆಚ್ಚೆಚ್ಚು ಅವಕಾಶ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು. ಇದೇ ವೇಳೆ ಚಲನಚಿತ್ರ ನಿರ್ದೇಶಕ ಸಿದ್ದೇಗೌಡ ಬಿಜಿಎಸ್, ಸಂಗೀತ ನಿರ್ದೇಶಕ ಶ್ರೀನಿವಾಸ್ ಭಟ್(ಚೀನಿ) ಅವರಿಗೆ ‘ಮಿನುಗುವ ನಕ್ಷತ್ರ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಳಿಕ ‘ಹಿಂತಿರುಗಿ ನೋಡಿ’ ಹಾಗೂ ‘ಜಯಂತನ ಸೊಗತ’ ನಾಟಕ ಪ್ರದರ್ಶನ ನಡೆಯಿತು. ಮೈಲ್ಯಾಕ್ ಅಧ್ಯಕ್ಷ ಫಣೀಶ್, ಲಯನ್ ವೆಂಕಟೇಶ್, ನಂದಾ ಹಳೇಮನೆ, ಮಂಜುನಾಥ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.