ಸಿದ್ದರಾಮಯ್ಯಗೆ ಕಾಮನ್‌ಸೆನ್ಸ್ ಇಲ್ಲ

ಬೆಂಗಳೂರು, ನ.೩-ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾ ಯಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಕಾಮನ್‌ಸೆನ್ಸ್ ಇಲ್ಲ. ಓರ್ವ ವಕೀಲರಾಗಿ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಅವರು ವಾಸ್ತವಿಕ ಪ್ರಜ್ಞೆ ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅವರು ಮಾತನಾಡಿದ ವೀಡಿಯೊ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಶಾಸಕರು ಅವರದೇ ಆದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಏನು ಮಾಡಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸಭೆಯಲ್ಲಿ ನಾನು ಹೇಳಿದ್ದೇನೆಯೇ ಹೊರತು, ಅವರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ನಾನು ಹೇಳಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಆದರೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸುಳ್ಳುಗಳನ್ನು ಹೇಳಿಕೊಂಡು ನನ್ನ ಮತ್ತು ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಮೂರ್ಖತನದ ಪರಮಾವಧಿ. ಸಿದ್ದರಾಮಯ್ಯ ದೊಡ್ಡ ಲೀಡರ್ ಎಂದು ಹೇಳಿಕೊಂಡು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅನರ್ಹ ಶಾಸಕರ ರಾಜೀನಾಮೆಗೂ ಅಮಿತ್ ಶಾ ಅವರಿಗೂ ಏನು ಸಂಬAಧ? ಎಂದು ಪ್ರಶ್ನಿಸಿದ ಅವರು, ಸುಪ್ರೀಂಕೋರ್ಟ್ನಲ್ಲಿ ಗೊಂದಲ ಉಂಟು ಮಾಡಲು ಕಾಂಗ್ರೆಸ್ ಸಂಚು ನಡೆಸುತ್ತಿದೆ. ನ್ಯಾಯಾಲಯಕ್ಕೆ ವೀಡಿಯೊ ತೆಗೆದುಕೊಂಡು ಹೋದರೆ ಛೀಮಾರಿ ಹಾಕಿಸಿಕೊಂಡು ಬರಬೇಕಾಗುತ್ತದೆ ಎಂದು ಹೇಳಿದ ಅವರು, ಸಿದ್ದರಾಮಯ್ಯನವರಿಗೆ ಯಾರೂ ಗೌರವ ಕೊಡುತ್ತಿಲ್ಲ. ಅವರ ನಡವಳಿಕೆಯನ್ನು ಕಾಂಗ್ರೆಸ್‌ನವರೇ ಇಷ್ಟಪಡುತ್ತಿಲ್ಲ ಎಂದು ಹೇಳಿದರು.